ಅದ್ಭುತ ಕಂಠದ ಮೂಲಕ ಗಾಯಕಿ ಮಂಗ್ಲಿ ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾದ ತೆಲುಗು ಅವತರಣಿಕೆಯ ‘ಕಣ್ಣೇ ಅಧಿರಿಂದಿ’ ಹಾಡನ್ನು ಹಾಡಿ ಕರ್ನಾಟಕದ ಜನತೆಗೂ ಹೆಚ್ಚು ಪರಿಚಿತರಾದರು. ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ತೆಲುಗು ಜನಪದ ಹಾಡುಗಳನ್ನು ಹಾಡುವ ಮೂಲಕ ಗುರುತಿಸಿಕೊಂಡವರು ಮಂಗ್ಲಿ. ತೆಲುಗು ನಾಡಿನ ಸಂಸ್ಕೃತಿಗೆ ಸರಿ ಹೊಂದುವ ಸಾಕಷ್ಟು ಹಾಡುಗಳನ್ನು ಹಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ಅವರು. ತೆಲುಗು ರಾಜ್ಯಗಳಲ್ಲಿ ಈಗ ಬೊನಾಲು ಹಬ್ಬದ ಸಮಯ. ಈ ವಿಶೇಷ ಸಂದರ್ಭದಲ್ಲಿ ಮಂಗ್ಲಿ ‘ಬೊನಾಲು…’ ಹಾಡನ್ನು ಹಾಡಿ, ನೃತ್ಯ ಮಾಡಿದ್ದಾರೆ. ಈ ಹಾಡಿನಿಂದ ಕೆಲವರು ಬೇಸರಗೊಂಡರೆ, ಇನ್ನೂ ಕೆಲವರು ಈ ಹಾಡು ದೇವರಿಗೆ ಅವಮಾನ ಮಾಡುವ ರೀತಿಯಲ್ಲಿದೆ ಎಂದು ತಕರಾರು ತೆಗೆದಿದ್ದಾರೆ.
‘ನೀವು ಅಮ್ಮನ ಬಗ್ಗೆ ಹಾಗೆ ಮಾತನಾಡುತ್ತೀರಾ? ಭಕ್ತಿಯ ಹೆಸರಿನಲ್ಲಿ ದೇವರಿಗೆ ಅಪಹಾಸ್ಯ ಮಾಡಬೇಡಿ’ ಎಂದು ಅನೇಕರು ಕಮಂಟ್ ಮಾಡಿದ್ದಾರೆ. ‘ಭಕ್ತರ ಭಾವನೆ ನೋಯಿಸಿದ ಮಂಗ್ಲಿ ತೆಲಂಗಾಣ ಜನರ ಬಳಿ ಕ್ಷಮೆಯಾಚಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ, ಮಂಗ್ಲಿ ವಿರುದ್ಧ ಹೈದರಾಬಾದ್ನ ಬಿಜೆಪಿ ಕಾರ್ಪೊರೇಟರ್ಗಳು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಏನಿದು ಬೊನಾಲು:
ತೆಲಂಗಾಣದ ಪರಿಶಿಷ್ಟ ಮತ್ತು ಹಿಂದುಳಿದ ಜನಾಂಗದವರು ಬೊನಾಲು ಹಬ್ಬವನ್ನು ಆಚರಿಸುತ್ತಾರೆ. ಶಕ್ತಿ ದೇವತೆಯಾದ ಮಹಾಕಾಳಿ ಅಥವಾ ಕಾಳಿಯ ಕುರಿತಾದ ಈ ಆಚರಣೆಯು ಹೈದರಾಬಾದ್, ಸಿಕಂದರಾಬಾದ್, ತೆಲಂಗಾಣ ಮತ್ತು ರಾಯಲಸೀಮಾದ ಭಾಗಗಳಲ್ಲಿದೆ. ಇದನ್ನು ಆಷಾಢ ಮಾಸದಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕಡೆಯ ದಿನದಲ್ಲಿ ಎಲ್ಲಮ್ಮದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.