ವಿಟ್ಲ: ಎಸ್.ಎಸ್.ಎಲ್.ಸಿ ಓದುತ್ತಿದ್ದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಇದಕ್ಕೆಲ್ಲಾ ಈತನು ಓದುತ್ತಿದ್ದ ಅಳಿಕೆ ಸತ್ಯಸಾಯಿ ಲೋಕ ಸಂಸ್ಥೆಯ ಶಾಲೆಯ ಶಿಕ್ಷಕರೇ ನೇರ ಆರೋಪ ಎಂಬ ಮಾತುಗಳು ಪೋಷಕರ ಹಾಗೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಹೋಗಿಲ್ಲ ಎನ್ನಲಾಗಿದೆ. ನಿನ್ನೆ ರಾತ್ರಿ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಮನೆಯವರು ನೋಡಿದಾಗ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಸುದ್ದಿ ವಿ.ಟಿವಿ ವೆಬ್ ಸೈಟ್’ನಲ್ಲಿ ಪ್ರಸಾರವಾಗುತ್ತಿದ್ದಂತೆ ಅಲ್ಲಿನ ಸ್ಥಳೀಯರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ನಮ್ಮ ತಂಡಕ್ಕೆ ಅಲ್ಲಿ ಆರೋಪ ಪ್ರತ್ಯಾರೋಪದ ಸುರಿಮಳೆಯೇ ಗಮನಕ್ಕೆ ಬಂದಿದೆ. ಸ್ಥಳೀಯರು ಹಾಗೂ ಪೋಷಕರು ಬಾಲಕನ ಸಾವಿಗೆ ಶಿಕ್ಷಣ ಸಂಸ್ಥೆಯೇ ನೇರ ಕಾರಣ ಎಂಬ ಮಾತುಗಳು ಕೇಳಿಬಂದಿದೆ.
ಸತ್ಯ ಸಾಯಿ ಬಾಬಾರವರ ಸಮರ್ಥ ಮಾರ್ಗದರ್ಶನದಲ್ಲಿ ಮುಂದುವರೆದ ಟ್ರಸ್ಟ್ ಈಗ ದೇಶದಾದ್ಯಂತ ಹೆಸರು ಮಾಡಿದೆ. ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ನಡೆಸುವಷ್ಟು ವಿದ್ಯಾರ್ಥಿಗಳು ಇಲ್ಲಿಗೆ ಪ್ರವೇಶವನ್ನು ಬಯಸಿ ಬರುತ್ತಿದ್ದಾರೆ. ಇಲ್ಲಿ ವಿದ್ಯಾಭ್ಯಾಸವನ್ನು ಮಾಡಿದವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.
ಅಂದು ಆದರ್ಶತತ್ವಗಳನ್ನು ಜಗತ್ತಿಗೆ ತಿಳಿಸಿದ ಸತ್ಯಸಾಯಿ ಬಾಬಾರಿಂದ ನಿರ್ಮಿಸಲ್ಪಟ್ಟ ಶಾಲೆಯ ಮೇಲೆ ಇಂದು ಕಳಂಕ ಅಂಟಿಕೊಂಡಿದೆ. ಸತ್ಯ ಸಾಯಿ ಬಾಬಾರ ಆದರ್ಶಗಳು ದಿನದಿಂದ ದಿನಕ್ಕೆ ಇಲ್ಲಿ ಕ್ಷೀಣಿಸುತ್ತಿದೆಯಾ ಎಂಬ ಪ್ರಶ್ನೆಗಳೂ ಸಾರ್ವಜನಿಕ ವಲಯದಲ್ಲಿ ಕೇಳಿದೆ.
ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ರಘು ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯಾಗಿ ಘಟನೆ ನಡೆಯಬಾರದಿತ್ತು. ಶಾಲೆ ಪ್ರಾರಂಭವಾದ ಬಳಿಕದಿಂದ ಪಠ್ಯ ಪೂರ್ಣಗೊಳಿಸುವ ಒತ್ತಡವಿತ್ತು. ಈ ರೀತಿಯಾಗಿ ನಡೆದಿದ್ದು ಬಹಳ ಬೇಸರವಾಗಿದೆ. ಇದರ ಬಗ್ಗೆ ಕಾನೂನು ರೀತಿಯಲ್ಲಿ ಸೂಕ್ತ ತನಿಖೆ ನಡೆಯಲಿ ಎಂದಿದ್ದಾರೆ.
ತನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರು ಇದ್ದಾರೆ. ಪೋಷಕರು ಹಾಗೂ ಸ್ಥಳೀಯರು ಶಾಲೆಯ ಒತ್ತಡವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಿಜಾಂಶ ತನಿಖೆಯಿಂದ ಬಯಲಾಗಬೇಕಾಗಿದೆ.