ವಿಟ್ಲ: ಕೇಪು ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ವಾಣಿಜ್ಯ ತೆರಿಗೆ ಆಯುಕ್ತ ದಿ. ಅಶೋಕ್ ಎ ಇರಾಮೂಲೆ ಅವರ ಸ್ಮರಣಾರ್ಥವಾಗಿ ನೂತನವಾಗಿ ನಿರ್ಮಾಣಗೊಂಡ “ಶ್ರೀ ದುರ್ಗಾ ರಂಗಮಂದಿರದ ಲೋಕಾರ್ಪಣೆ ಸಮಾರಂಭ ನಡೆಯಿತು.
ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದುರ್ಗಾ ಸೇವಾ ಸಮಿತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರ ಕೈ ಜೋಡಿಸಿದೆ. ಅಶೋಕ್ ಇರಾಮೂಲೆ ಅವರ ಸಾಮಾಜಿಕ ಸೇವೆ ಅವಿಸ್ಮರಣೀಯವಾಗಿದ್ದು, ಅವರ ಹೆಸರಿನಲ್ಲಿ ರಂಗ ಮಂದಿರ ನಿರ್ಮಾಣ ಮಾಡಿದ್ದು ಶ್ರೇಷ್ಠ ಕಾರ್ಯವಾಗಿದೆ ಎಂದರು.
ಬೆಂಗಳೂರು ಉಚ್ಛ ನ್ಯಾಯಾಲಯದ ವಕೀಲ ರಾಜೇಶ್ ರೈ ಕಲ್ಲಂಗಳಗುತ್ತು ಅವರು ಮಾತನಾಡಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಶೋಕ್ ಅವರು ಗುರುತಿಸಿಕೊಂಡಿದ್ದರು. ಅವರ ಸಮಾಜಮುಖಿ ಕಾರ್ಯ ಚಿರಸ್ಥಾಯಿಯಾಗಲಿದೆ ಎಂದರು.
ಮೈಸೂರು ಎಸ್ ಎಲ್ ವಿ ಬುಕ್ ಕಂಪೆನಿ ಮಾಲಕ ದಿವಾಕರದಾಸ್ ನೇರ್ಲಾಜೆ ಅವರು ಮಾತನಾಡಿ ಅಶೋಕ್ ಇರಾಮೂಲೆ ಅವರ ಸೇವೆಯನ್ನು ಇಡೀ ಜಿಲ್ಲೆಯ ಜನತೆ ಮರೆಯಲು ಸಾಧ್ಯವಿಲ್ಲ. ಅವರ ಸೇವೆ ಅವಿಸ್ಮರಣೀಯ ಎಂದು ಹೇಳಿದರು.
ಕೇಪು ಶ್ರೀ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ, ಕೇಪು ದುರ್ಗಾಪರಮೇಶ್ವರೀ ಭಜನಾ ಮಂಡಳಿ ಅಧ್ಯಕ್ಷ ನವೀನ್ ಕೆ, ಮತ್ತು ಎಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಬೆಳಿಗ್ಗೆ ನೂತನ ರಂಗಮಂದಿರದಲ್ಲಿ ವೇದಮೂರ್ತಿ ಸೂರ್ಯನಾರಾಯಣ ಕೇಕುಣ್ಣಾಯ ಅವರ ನೇತೃತ್ವದಲ್ಲಿ ಶ್ರೀಗಣಪತಿ ಹೋಮ ನಡೆಯಿತು.
ಈ ಸಂದರ್ಭ ಪ್ರಗತಿಪರ ಕೃಷಿಕ ವಳಕಟ್ಟೆ ಶಂಕರ್ ಭಟ್, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ನೆಕ್ಕರೆ, ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಭಟ್ ಅಮೈ, ಶ್ರೀನಿವಾಸ್ ರೈ ಕುಂಡಕೋಳಿ, ಕವಿತಾ ಅಶೋಕ್ ಇರಾಮೂಲೆ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಕೇಪು ಯಕ್ಷ ಮಿತ್ರರ ಕಾರ್ಯದರ್ಶಿ ಪುರುಷೋತ್ತಮ ಮೈರ, ಅಡ್ಯನಡ್ಕ ಉದ್ಯಮಿ ಗೋವಿಂದರಾಯ ಶೆಣೈ ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿಸಿದರು. ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿದರು.