ವಿಟ್ಲ: ಸದಾ ಒಂದಲ್ಲೊಂದು ಪ್ರಕರಣಗಳು ನಡೆಯುತ್ತಿರುವ ಕರ್ನಾಟಕ-ಕೇರಳ ಗಡಿ ಭಾಗದಲ್ಲಿನ ವಿಟ್ಲ ಪೊಲೀಸ್ ಠಾಣೆಗೆ ಹೊಸ ವಾಹನ ಒದಗಿಸಲು ಸರಕಾರಕ್ಕೆ ಇನ್ನೂ ಗತಿಯಿಲ್ಲದಾಯಿತೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಹೌದು. ಕೇರಳ ಗಡಿಭಾಗದಲ್ಲಿರುವ ವಿಟ್ಲ ಪೊಲೀಸ್ ಠಾಣೆ ಮೇಲ್ದರ್ಜೆಗೇರಿ ವರ್ಷ ಕಳೆದಿದ್ದರೂ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ಸಂದರ್ಭದಲ್ಲಿ ತಲುಪಲು ಸರಿಯಾದ ವಾಹನ ಇಲ್ಲದಾಗಿದೆ. ಮೇಲ್ದರ್ಜೆಗೇರಿದ ಕಾರಣಕ್ಕಾಗಿ ಸಿಬ್ಬಂದಿಗಳನ್ನು ಒದಗಿಸಿದ್ದರೂ ವಾಹನ ಸೌಕರ್ಯ ಮಾತ್ರ ಇಲ್ಲವಾಗಿದೆ. ಈಗಿರುವ ಎರಡು ವಾಹನಗಳ ಪೈಕಿ ಒಂದು ಮಾತ್ರ ಸುಸ್ಥಿತಿಯಲ್ಲಿದ್ದು ಇನ್ನೊಂದು ವಾಹನ ಯಾವುದೇ ಕ್ಷಣ ದಾರಿ ಮಧ್ಯೆಯೇ ಕರು ಹಾಕುವಂತಿದೆ.
ವಿಟ್ಲ ಠಾಣೆ ಅಂತರ್ರಾಜ್ಯ ಗಡಿಭಾಗದಲ್ಲಿರುವ ಕಾರಣ ಸಾಕಷ್ಟು ಸಂಖ್ಯೆಯಲ್ಲಿರುವ ಕ್ರಿಮಿನಲ್ಲುಗಳು, ದೋ ನಂಬರ್ ದಂಧೆಯವರು, ಸಮಾಜ ಘಾತುಕರನ್ನು ಮಟ್ಟಹಾಕುವ ಮೂಲಕ ಠಾಣಾ ವ್ಯಾಪ್ತಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಪೊಲೀಸರ ಹೆಗಲಮೇಲಿದೆ. ಆದರೆ ಜನರ ಕಷ್ಟಗಳಿಗೆ ಸಕಾಲದಲ್ಲಿ ತಲುಪಬೇಕಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಹೋಗಲು ಗುಜರಿ ವಾಹನದಿಂದಾಗಿ ಅಸಾಧ್ಯವಾಗಿದೆ.
ಮಂತ್ರಿ-ಮಾಗಧರಿಗೆ 26ಲಕ್ಷ ಬೆಲೆಬಾಳುವ ಐಷಾರಾಮಿ ವಾಹನಗಳನ್ನು ನೀಡುತ್ತಿರುವ ಸರಕಾರ, ಜನ ಸಾಮಾನ್ಯರ ನೆಮ್ಮದಿಯ ಬದುಕಿಗೆ ಕೈಜೋಡಿಸುವ ಪೊಲೀಸ್ ಸಿಬ್ಬಂದಿಗಳ ಓಡಾಟಕ್ಕೆ ಗುಜರಿ ವಾಹನವನ್ನು ಹಿಂಪಡೆದು ಹೊಸ ವಾಹನ ನೀಡಬಾರದೇ ಎಂಬುದು ನಾಗರಿಕರ ಮಾತಾಗಿದೆ.ಇನ್ನಾದರೂ ಸರಕಾರ, ಇಲಾಖೆಯ ಹಿರಿಯ ಅಧಿಕಾರಿಗಳು ವಿಟ್ಲ ಠಾಣೆಯ ಗುಜರಿ ವಾಹನವನ್ನು ಹಿಂಪಡೆದು ಹೊಸ ವಾಹನ ನೀಡುವುದೋ ಕಾದು ನೋಡಬೇಕಿದೆ.