ವಿಟ್ಲ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ವಿಟ್ಲ ಮಹಿಳಾ ಮತ್ತು ಮಕ್ಕಳ ಇಲಾಖೆ ವಿಟ್ಲ ಹಾಗೂ ಅಂಗನವಾಡಿ ಕೇಂದ್ರ ಮೇಗಿನಪೇಟೆ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷ ಸುದೇಶ್ ಭಂಡಾರಿ ವಹಿಸಿದರು. ಮಕ್ಕಳ ಪೌಷ್ಟಿಕ ಆಹಾರ ಹಾಗೂ ಅರೋಗ್ಯ ಜೀವನದ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನಾಧಿಕಾರಿ ಉಷಾ ಹಾಗೂ ನಿವೃತ್ತ ಯೋಜನಾಧಿಕಾರಿ ಶ್ರೀಮತಿ ಸುಧಾ ಜೋಶಿ ಮಾಹಿತಿ ನೀಡಿದರು. ವಿಟ್ಲ ಲಯನ್ಸ್ ಸಂಸ್ಥೆಯ ವತಿಯಿಂದ ಸುಮಾರು 37 ವರ್ಷ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಸೇವೆ ನೀಡಿದ ಸಂಪನ್ಮೂಲ ವ್ಯಕ್ತಿ ಸುಧಾ ಜೋಶಿ ಇವರನ್ನು ಸನ್ಮಾನಿಸಲಾಯಿತು.
ಪೌಷ್ಟಿಕ ಆಹಾರ ತಯಾರಿಸಿದ ಸ್ತ್ರಿಶಕ್ತಿ ಸಂಘದ 16 ಸದಸ್ಯರಿಗೆ ಲಯನ್ಸ್ ಸಂಸ್ಥೆಯ ವತಿಯಿಂದ ಬಹುಮಾನ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಲುವಿಸ್ ಯಂ ಕೋಶಾಧಿಕಾರಿ ಗಂಗಾಧರ್ ಮಾಜಿ ಪ್ರಾಂತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಂಚಾಯತ್ ಮಾಜಿ ಸದಸ್ಯ ರಾಮದಾಸ ಶೆಣೈ, ಆರೋಗ್ಯ ಸಹಾಯಕಿ ಇಂದಿರಾ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಉಪಸ್ಥಿತರಿದ್ದರು. ಶಾಂತಿ ಶಾಲಿನಿ ಪಾಯಿಸ್ ಸ್ವಾಗತಿಸಿದರು. ಮೇಲ್ವಿಚಾರಕಿ ಲೀಲಾವತಿ ವಂದಿಸಿ ನಿರೂಪಿಸಿದರು.