ವಿಟ್ಲ: ಇಂಗ್ಲೀಷ್ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಸಾವಿರಾರು ಕನ್ನಡ ಮಾಧ್ಯಮ ಶಾಲೆಗಳು ನೆಲಕಚ್ಚಿದ ನೋವಿನ ನಡುವೆಯೇ ವಿದ್ಯಾಭಿಮಾನಿಗಳ, ಪೋಷಕರ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಪರಿಶ್ರಮ ಮತ್ತು ಹೃದಯ ಶ್ರೀಮಂತಿಕೆಯಿಂದಾಗಿ ಮಿತ್ತೂರು ಸರಕಾರಿ ಶಾಲೆ ರಾಜ್ಯದಲ್ಲೇ ಮಾದರಿಯಾಗಿದೆ.
4.14 ಎಕರೆ ಜಮೀನು ಹೊಂದಿದ್ದು ಈ ಪೈಕಿ ಒಂದು ಎಕರೆ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದಲ್ಲದೇ ತರಕಾರಿ ಕೃಷಿ, ತೆಂಗು, ಪಪ್ಪಾಯಿ ಸೇರಿದಂತೆ ಇನ್ನಿತರ ಉಪಬೆಳೆ ಬೆಳೆಯುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಬದುಕುವ ತರಬೇತಿಯನ್ನೂ ಶಿಕ್ಷಕ ವರ್ಗದವರು ನೀಡುತ್ತಿದ್ದಾರೆ.
ಕಳೆದ ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ಶಿಕ್ಷಕ ವರ್ಗ ಹಾಗೂ ಅಭಿವೃದ್ಧಿ ಸಮಿತಿಯವರು ಮಿತದರದಲ್ಲಿ ಆಟೋ ರಿಕ್ಷಾಗಳ ಸೇವೆ ಆರಂಭಿಸಿದ್ದರು. ಇದೀಗ ಶಾಲಾ ಜಮೀನಿನಲ್ಲಿ ಬೆಳೆದ ಅಡಿಕೆ ಕೃಷಿ, ತರಕಾರಿ ಬೆಳೆಯಿಂದ ಬಂದ ಲಾಭದಲ್ಲಿ ಸ್ವಂತ ಶಾಲಾ ಬಸ್ ಖರೀದಿಸಿ ಮಿತದರದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಒದಗಿಸುವ ಮಾಲಕ ರಾಜ್ಯಕ್ಕೇ ಮಾದರಿ ಸ್ವಾವಲಂಬಿ ಸರಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.