
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ತಾಲ್ಲೂಕು ವತಿಯಿಂದ ವಿಟ್ಲದ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜ್ ನಲ್ಲಿ ಭಾನುವಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಅವರು ಉದ್ಘಾಟಿಸಿ, ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದರೆ ಸಮಾಜದ ಅಭಿವೃದ್ಧಿ ಎಂಬುದಾಗಿದೆ. ಯೋಜನೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಸೃಷ್ಟಿಯಾಗಿದೆ. ನಿರಂತರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಹಲವು ಕಡುಬಡ ಕುಟುಂಬಕ್ಕೆ ಬೆಳಕು ಚೆಲ್ಲಿದೆ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಶಿಕ್ಷಕ ವಿಠಲ ನಾಯಕ್ ಅವರು ಮಾನವೀಯ ಮೌಲ್ಯಗಳ ನಶಿಸಿ ಹೋಗುತ್ತಿದ್ದು, ಕುಟುಂಬ ಮತ್ತು ಮಕ್ಕಳ ನೆಮ್ಮದಿ ಹಾಳಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಗಟ್ಟಿ ಮಾಡಬೇಕು. ಇದರಿಂದ ಕುಟುಂಬ ಸಂಬಂಧ ಬಲಿಷ್ಠವಾಗಿರುತ್ತದೆ. ತುಳುನಾಡಿಗೆ ವಿಶಿಷ್ಟವಾದ ಶಕ್ತಿ ಇದೆ. ಆದರೆ ಆಧುನಿಕ ಕಾಲದಲ್ಲಿ ತುಳುನಾಡಿನ ಭಾಷೆ ಸಂಸ್ಕೃತಿ ದೂರವಾಗುತ್ತಿದೆ. ಮಕ್ಕಲ್ಲಿ ತುಳುನಾಡಿನ ಆಚಾರ ವಿಚಾರಗಳನ್ನು ಕಲಿಸುವ ಕಾರ್ಯ ನಡೆಯಬೇಕು ಎಂದರು.
ವಿಟ್ಲ ವಲಯ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ವಲಯ ಅಧ್ಯಕ್ಷ ಜನಾರ್ಧನ ಪದ್ಮಶಾಲಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ವಲಯದ 9 ಒಕ್ಕೂಟಗಳ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.
ಈ ಸಂದರ್ಭ ವಿಟ್ಲ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ವಿಠಲ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಟ್ಲ ಜನಜಾಗೃತಿ ವೇದಿಕೆಯ ಸದಸ್ಯ ನಟೇಶ್ ವಿಟ್ಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಚೆನ್ನಪ್ಪ ಗೌಡ, 9 ಒಕ್ಕೂಟಗಳ ಅಧ್ಯಕ್ಷರು ಉಪಸ್ಥಿತರಿದ್ದರು. ರಾಧಾಕೃಷ್ಣ ಎರುಂಬು ಮತ್ತು ಹೇಮ ನಿರೂಪಿಸಿದರು. ಉಮಾ ಪ್ರಾರ್ಥಿಸಿದರು. ಯೋಜನಾಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿದರು. ಮೇಲ್ವಿಚಾರಕಿ ಸರಿತಾ ವರದಿ ಓದಿದರು.ಹರೀಶ್ ಪೂಜಾರಿ ವಂದಿಸಿದರು.










