ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುರಭವನ ಬಳಿ ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯನ್ನು ಜಯರಾಮ್ ಉಕ್ಕುಡ ಮಣ್ಣು ಹಾಕಿ ಬಂದ್ ಮಾಡಿದ್ದರ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಪುರಭವನ ಬಳಿ ಇರುವ ರಸ್ತೆಯನ್ನು ಇತ್ತೀಚೆಗೆ ಪಟ್ಟಣ ಪಂಚಾಯಿತಿ ಅಭಿವೃದ್ಧಿಗೊಳಿಸಿತ್ತು. ಈ ಭಾಗದಲ್ಲಿ ನೂರಕ್ಕಿಂತಲೂ ಅಧಿಕ ಮನೆಗಳಿವೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನಕ್ಕೂ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಕೆಲ ದಿನಗಳ ಹಿಂದೆ ಜಯರಾಮ್ ಉಕ್ಕುಡ ಎಂಬವರು ಈ ರಸ್ತೆ ನನ್ನ ವರ್ಗ ಜಾಗದಲ್ಲಿದೆ ಎಂದು ಆರೋಪಿ ರಸ್ತೆಯನ್ನು ಬಂದ್ ಮಾಡಿದ್ದರು. ಇದರಿಂದ ಈ ಭಾಗದ ಜನರು ಭಾರೀ ತೊಂದರೆ ಅನುಭವಿಸಿದ್ದರು. ಈ ಬಗ್ಗೆ ವಿಟ್ಲ ಬಿಲ್ಲವ ಸಂಘ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರ,ಮತ್ತು ನಾಗರೀಕರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತೆರವುಗೊಳಿಸುವಂತೆ ಆದೇಶ ನೀಡಿದ್ದರು.
ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಪುರಂದರ, ಸಹಾಯಕ ಎಂಜಿನಿಯರ್ ಅರುಣ್
ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಎಂಜಿನಿಯರ್ ದಿನೇಶ್, ಸದಸ್ಯರಾದ ಸಂಗೀತ ಜಗದೀಶ ಪಾಣೆಮಜಲು, ಅರುಣ ಎಂ ವಿಟ್ಲ, ಹರೀಶ್ ಸಿ.ಎಚ್,ಅಶೋಕ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.
ಈ ವ್ಯಕ್ತಿಗೆ ಸಂಭಂಧಿಸಿದಂತೆ ಅನೇಕ ಕಡೆ ಜಾಗವಿದ್ದು ಈ ಮೊದಲು ಅಲ್ಲಿಯೂ ಇದೇ ರೀತಿ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ.