ವಿಟ್ಲ ತಾಲೂಕಿನ ಸಾಲೆತ್ತೂರು ಗ್ರಾಮದ ಮೆದು ಎಂಬಲ್ಲಿ ಶ್ರೀ ಕ್ಷೇತ್ರ ಕಟ್ಟತ್ತಿಲ ಶ್ರೀ ಮಹಾಮ್ಮಾಯಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಅಡ್ಡವಾಗಿ ಸಿರಾಜ್ ಇಸ್ಲಾಂ ಜುಮ್ಮಾ ಮಸೀದಿಯ ಶಾಶ್ವತ ಅನಧಿಕೃತ ದ್ವಾರ ಹಾಕಿರುವುದರಿಂದ ಇದರ ವಿರುದ್ಧ ಸ್ಥಳೀಯರು (ಸಾಲೆತ್ತೂರು ಗ್ರಾಮ ಪಂಚಾಯತ್), ಪಂಚಾಯತ್ ಪಿ.ಡಿ ಓ ಮತ್ತು ಬಂಟ್ವಾಳ ತಾಲೂಕು ತಹಶಿಲ್ದಾರರಿಗೆ ಲೋಕೋಪಯೋಗಿ ಇಲಾಖೆ (PWD) ಇವರುಗಳಿಗೆ ದೂರು ಸಲ್ಲಿಸಿದರೂ ಕೂಡ ದ್ವಾರ ತೆರವುಗೊಳಿಸುವ ಯಾವುದೇ ಕ್ರಮ ಈ ಕ್ಷಣದವರೆಗೆ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಮತ್ತು ದೇವಸ್ಥಾನದ ಭಕ್ತರು ವ್ಯಕ್ತಪಡಿಸಿದ್ದರು.
ನಂತರದ ಬೆಳವಣಿಗೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಹಿಂದು ಜಾಗರಣ ವೇದಿಕೆ ವಿಭಾಗ ಪ್ರಮುಖರು, ಜಿಲ್ಲಾ ಪ್ರಮುಖರು ಹಾಗೂ ವಿಟ್ಲ ತಾಲೂಕು ಪ್ರಮುಖರು ದೇವಸ್ಥಾನದ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ಸಂಪೂರ್ಣ ಬೆಂಬಲ ಸೂಚಿಸಿ ಇದನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ ಹಾಗೂ ಪಿ.ಡಿ. ಓ ಗೆ ಒತ್ತಾಯಿಸಿದರು. ಮತ್ತು ಹಿಂದೂಗಳ ಜೊತೆಗೆ ಸದಾ ಹಿಂದು ಜಾಗರಣ ವೇದಿಕೆ ಇದೆ ಎಂಬ ಸಂದೇಶವನ್ನು ನೀಡಿತ್ತು.
ತಕ್ಷಣ ಈ ದ್ವಾರ ತೆರವು ಗೊಳಿಸದಿದ್ದರೆ ಹಿಂದು ಜಾಗರಣ ವೇದಿಕೆ ಇದರ ವಿರುದ್ದ ಉಗ್ರವಾದ ಹೋರಾಟವನ್ನು ಮಾಡಲಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು. ಹಿಂದು ಜಾಗರಣ ವೇದಿಕೆಯ ಹೋರಾಟದ ಎಚ್ಚರಿಕೆಯ ನಂತರ ಪ್ರಥಮವಾಗಿ ಮೇಲೆ ಹಾಕಿದ ನಾಮ ಫಲಕದ ಕಮಾನನ್ನು ತೆರವುಗೊಳಿಸಿ ನಂತರ ಕಂಬಗಳನ್ನು ತೆರವು ಗೊಳಿಸಿದ್ದು ಒಟ್ಟು ಹಿಂದು ಸಮಾಜದ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯವಾಗಿದೆ.