ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ‘ವಾರದ ಬೆಳಕು’ ಇದರ 6ನೇ ಸರಣಿ ಕಾರ್ಯಕ್ರಮವು ಇಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ನಡೆಯಿತು.
ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಸಂವಹನ ಕೌಶಲಗಳು ಇಂದಿನ ಸ್ಪರ್ಧಾ ಪ್ರಪಂಚದ ಅಗತ್ಯಗಳು – ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಭೌತ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಶ್ರೀಶ ಭಟ್ ಹೇಳಿದರು.
ಶೈಕ್ಷಣಿಕ ಮಾರ್ಗದರ್ಶನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಆಕಾಂಕ್ಷಾ ಟ್ರಸ್ಟ್ (ರಿ)ನ ಸ್ಥಾಪಕರೂ ಆಗಿರುವ ಇವರು ಇಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ‘ವಾರದ ಬೆಳಕು’ ಇದರ 6ನೇ ಸರಣಿ ಕಾರ್ಯಕ್ರಮದಲ್ಲಿ ‘ವಿದ್ಯಾರ್ಥಿ ಜೀವನದ ಸವಾಲುಗಳು ಮತ್ತು ಪರಿಹಾರ’ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್ ಕೆ ಜಿ ವಹಿಸಿದ್ದರು.
ಮಾಣಿಲದಂಥ ತೀರಾ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ದಶಕಗಳಿಂದ ನಿರಂತರ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಲಕ್ಷ್ಮಿ ನಾರಾಯಣ ಭಟ್ ಕೊಡಂಗೆ ಇವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು . ಪೆರುವಾಯಿ ಗ್ರಾಪಂ ಸದಸ್ಯರಾದ ಶ್ರೀ ರಾಜೇಂದ್ರನಾಥ ರೈ ಗುತ್ತು ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಎಸ್ ಡಿ ಎಂಸಿ ಸದಸ್ಯರಾದ ಶ್ರೀ ವಿಷ್ಣು ಕನ್ನಡಗುಳಿ ಪ್ರಾಸ್ತಾವಿಕವಾಗಿ ನುಡಿಗೈದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕುಮಾರಿ ಧನುಶ್ರೀ ಜೆ.ಕೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಆತ್ಮಿಕಾ ರೈ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕುಮಾರಿ ಪ್ರಮಿತಾ ವಂದಿಸಿದರು.