ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ರಿಗೆ ತನ್ನದೇ ಕೈ ಬರಹದಲ್ಲಿ ಪತ್ರವೊಂದನ್ನ ಬರೆದಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆಗಳನ್ನ ನೀಡಿದ್ದ ಯುವತಿಯನ್ನು ಎಸ್ ಐಟಿ ಅಧಿಕಾರಿಗಳು ತಮ್ಮ ಜೊತೆ ಇರಿಸಿಕೊಂಡು ವಿಚಾರಣೆ ನಡೆಸಿದ್ದರು. ಸ್ಥಳ ಮಹಜರು ಸೇರಿದಂತೆ ಸಂತ್ರಸ್ತ ಯುವತಿಯ ಪ್ರಥಮ ಹಂತದ ವಿಚಾರಣೆಗೆಗಳು ನಿನ್ನೆ ಮುಕ್ತಾಯವಾಗಿತ್ತು.
ಇಂದು ಎಸ್ಐಟಿ ಅಧಿಕಾರಿಗಳು ಯುವತಿ ಹಾಗೂ ಮಾಜಿ ಸಚಿವರಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸದ್ಯ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಯುವತಿ ತನಿಖಾಧಿಕಾರಿಗಳ ಮೇಲೆ ಮಾಜಿ ಸಚಿವರು ಪ್ರಭಾವ ಬೀರುತ್ತಿರುವುದಾಗಿ ಆರೋಪಿಸಿದ್ದಾರೆ.
ಸಂತ್ರಸ್ತೆಯ ಪತ್ರದಲ್ಲಿರುವುದೇನು?
ವಿಷಯ: ನಾನು ನೀಡಿದ ಅತ್ಯಾಚಾರ ಪ್ರಕರಣದ ದೂರಿನ ವಿಚಾರಣೆಯಲ್ಲಿ ಆರೋಪಿಯನ್ನ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವ ಬಗ್ಗೆ.ಮೇಲ್ಕಂಡ ವಿಷಯಕ್ಕೆ ಸಂಬಂಧಿಸದಂತೆ ದಿನಾಂಕ ಮಾ 26ರಂದು ನನ್ನ ವಕೀಲರಾದ ಶ್ರೀ ಜಗದೀಶ್ವರ್ ಕೆ ಎನ್ ಅವರ ಮುಖಾಂತರ ತಮಗೆ ಮಾಜಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ್ದ ಬಗ್ಗೆ ದೂರನ್ನು ಸಲ್ಲಿಸಿರುತ್ತೇನೆ.
ಈ ದೂರನ್ನು ತಾವು ಸ್ವೀಕರಿಸಿ ನನಗೆ ನ್ಯಾಯಕೊಡಿಸುವ ಸಲುವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾಯಿಸಿದಿರಿ. ಮೊಕದ್ದಮೆ ಸಂಖ್ಯೆ 30/2021 ರಲ್ಲಿ ಐಪಿಸಿ 354(a), 506, 504, 376(c) 417 ಹಾಗೂ ಐಟಿ ಆ್ಯಕ್ಟ್ 67(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ನಂತರ ಪೊಲೀಸರ ವಿಚಾರಣೆ ಹಾಜಾರಾಗಿ ಮಾಹಿತಿಯನ್ನ ನೀಡುವಂತೆ ಮತ್ತು ಭದ್ರತೆ ಕಲ್ಪಿಸಲು ಮಾಹಿತಿ ಒದಗಿಸುವಂತೆ ನನಗೆ ನೋಟಿಸ್ ನೀಡಲಾಗಿರುತ್ತದೆ.
ನಂತರ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದು ನನ್ನ 164 ಹೇಳಿಕೆಯನ್ನ ದಾಖಲಿಸಲು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯದಲ್ಲಿ ಅವಕಾಶ ಮಾಡಿಕೊಟ್ಟರು. ಆದ ಕಾರಣ 30-3-2021 ರಂದು ನಾನು ನನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದೆನು. ಹಾಜರಾದ ದಿನ ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನನ್ನ ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ಕರೆದೊಯ್ದರು.
ಅಲ್ಲಿ ಅವರೊಂದಿಗೆ ಎಸ್ ಐ ಟಿ ತನಿಖಾಧಿಕಾರಿಗಳಾದ ಸಂದೀಪ್ ಪಾಟೀಲ್, ಎಸಿಪಿ ಕವಿತಾ ನನಗೆ ಪ್ರಶ್ನೆಗಳನ್ನ ಮಾಡಿದ್ದರು. ನಾನು ಅವರಿಗೆ ಸಂಪೂರ್ಣ ವಿವರ ನೀಡಿದೆನು. ನಂತರ ದಿನಾಂಕ 31-3-2021 ನನಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಲ್ಲಿಂದ ಆಡುಗೋಡಿಯ ಟೆಕ್ನಿಕಲ್ ವಿಭಾಗಕ್ಕೆ ಕರೆದೊಯ್ದ 161 ಹೇಳಿಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದರು. ನಂತರ ಸಮಯವಾದ ಕಾರಣ 1-4-21 ರಂದು ಬೆಳಗ್ಗೆ ಸ್ಥಳ ಪಂಚನಾಮೆ ಪ್ರಕ್ರಿಯೆ ನಡೆಸುವ ಸಲುವಾಗಿ ನನ್ನನ್ನು ಆರ್ ಟಿ ನಗರದ ಪಿಜಿ ಹಾಗೂ ಕೃತ್ಯ ನಡೆದ ರಮೇಶ್ ಜಾರಕಿಹೊಳಿ ಅವರ ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ಗೆ ಕರೆದೊಯ್ಯಲಾಯಿತು.
ಇದೆಲ್ಲಾ ಆದ ನಂತರ ದಿನಾಂಕ 2-4-21 ರಂದು ನನ್ನ 161 ಹೇಳಿಕೆಯ ಮುಂದುವರೆದ ವಿಚಾರಗಳನ್ನು ದಾಖಲಿಸಿಕೊಳ್ಳಲಾಯಿತು. ನನಗೆ ಒಟ್ಟಾರೆ ಪ್ರಕ್ರಿಯೆಗಳನ್ನು ನೋಡುತ್ತಿದ್ದರೆ ‘ನಾನು ಸಂತ್ರಸ್ತೆಯೋ ಇಲ್ಲ ಪ್ರಕರಣದ ಆರೋಪಿಯೋ’ ಎಂಬ ಅನುಮಾನ ಮೂಡಿದೆ. ಪ್ರಕರಣದ ಆರೋಪಿಗೆ ಕೇವಲ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ವಕೀಲರೊಂದಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಹಲು ಅನುಮತಿ ನೀಡಿದ್ದಾರೆ. ಮುಕ್ತವಾಗಿ ಓಡಾಡಿಕೊಂಡು ಇರಲಿ ಎಂದು ಎಸ್ಐಟಿ ತಂಡ ಅವರಿಗೆ ಅವಕಾಶ ಮಾಡಿಕೊಟ್ಟಿದೆ, ಆದರೆ ನನ್ನನ್ನು ನಿರಂತರವಾಗಿ ಒಂದು ದಿನವೂ ಬಿಡುವು ನೀಡದಂತೆ ಹೇಳಿಕೆಗಳನ್ನು ಪಡೆಯಾಲಾಗುತ್ತಿದೆ.
ನನ್ನ ಹೆಸರು ರಮೇಶ್ ಜಾರಕಿಹೊಳಿ ಅವರು ನೀಡಿದ ದೂರಿನಲ್ಲಿ ಉಲ್ಲೇಖವಾಗದಿದ್ದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶಮಾಡಿದ್ದಾರೆ. ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಮಣಿದಿದ್ದಾರೆ. ಈ ಕ್ಷಣದವರೆಗೂ ನನ್ನ ತೇಜೋವಧೆ ಮಾಡುವಂತಹ ಸುಳ್ಳು ವಿಚಾರಗಳನ್ನು ಮಾಧ್ಯಮದಲ್ಲಿ ಬಿತ್ತರಿಸಿ ಆರೋಪಿಯ ರಕ್ಷಣೆಗೆ ನಿಂತಿರುವುದು ಎದ್ದು ಕಾಣುತ್ತಿದೆ.
ನಾನು ಪ್ರಕರಣದ ದೂರುದಾರಳಾಗಿದ್ದು ನನ್ನ ಚಾರಿತ್ರ್ಯವಧೆ ಮಾಡುವಂತಹ ಷಡ್ಯಂತ್ರವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದು ಎಸ್ಐಟಿ ಅಧಿಕಾರಿಗಳ ಮೇಲೆ ತೀವ್ರವಾದ ಒತ್ತಡವನ್ನ ಸರ್ಕಾರದಿಂದ ಹಾಕಿಸುತ್ತಿದ್ದಾರೆ.
ಪ್ರತಿನಿತ್ಯ ಮಾಧ್ಯಮಗಳಲ್ಲಿ ನಾನು ಅತ್ಯಾಚಾರ ಸಂತ್ರಸ್ಥೆ ಎಂಬುದನ್ನ ಮರೆಮಾಚಲು ಅನೇಕ ಸೃಷ್ಠಿತ ಸುದ್ಧಿಗಳನ್ನು ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಕ್ಷಣದ ವರೆಗೂ ನನಗೆ ನಾನು ನೀಡಿದ ದೂರಿನ ವಿಚಾರವಾಗಿ ಆರೋಪಿ ವಿರುದ್ಧ ಯಾವುದೇ ಗಂಭಿರವಾದ ವಿಚಾರಣೆ ನಡೆಸುತ್ತಿರುವ ಬಗ್ಗೆ ವಿಶ್ವಾಸ ಬಂದಿಲ್ಲ. ಇದರ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದು ಹೇಳಿರುವುದು ನನಗೆ ತೀವ್ರ ಆತಂಕವನ್ನ ಉಂಟು ಮಾಡಿದೆ.
ನನ್ನ ಸಹಮತ ಪಡೆಯದೆ ಈ ಪ್ರಕರಣಕ್ಕೆ ಗೃಹ ಇಲಾಖೆ ವಿಶೇಷ ಸರ್ಕಾರಿ ಅಭಿಯೋಜಕರನ್ನ ನೇಮಕ ಮಾಡಿರುವುದಕ್ಕೆ ನನ್ನ ಆಕ್ಷೇಪವಿದೆ. ಇಡೀ ಪ್ರಕರಣವನ್ನ ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಬಗ್ಗೆ ನನಗೆ ನಂಬಿಕೆ, ವಿಶ್ವಾಸ ಇಲ್ಲದಂತಾಗಿದೆ. ದಯಮಾಡಿ ತಾವು ನನ್ನ ದೂರನ್ನು ಒಬ್ಬ ಸಂತ್ರಸ್ತೆ, ಅಸಹಾಯಕ ಯುವತಿಯ ದೃಷ್ಠಿಯಿಂದ ನೋಡುವ ಮೂಲಕ ಸರ್ಕಾರದ ಒತ್ತಡಗಳಿಗೆ ಮಣಿಯದೇ ಆರೋಪಿಗೆ ಯಾವುದೇ ರಿಯಾಯಿತಿಯನ್ನ ನೀಡದೇ ನ್ಯಾಯ ಸಮ್ಮತವಾಗಿ ವಿಚಾರಣೆ ನಡೆಸಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.