ಹಿಜಾಬ್ ಧರಿಸದೆ ಪರೀಕ್ಷೆ ಬರೆಯಲು ನಿರಾಕರಿಸಿದ ವಿದ್ಯಾರ್ಥಿನಿ ಆಲಿಯಾ ಅಸಾದಿ ತಮ್ಮ ಅಸಮಾಧಾನವನ್ನು ಟ್ವೀಟ್ನಲ್ಲಿ ಹೊರಹಾಕಿದ್ದಾರೆ. ಹೈಕೋರ್ಟ್ ಆದೇಶವನ್ನೇ ಧಿಕ್ಕರಿಸಿ, ಪರೀಕ್ಷೆ ಬರೆಯದೆ ಮನೆಗೆ ತೆರಳಿದ ಈಕೆಗೆ ಮತ್ತೆ ಮತ್ತೆ ಮುಖಭಂಗ ಆಗುತ್ತಿದ್ದರೂ ತನ್ನ ಬುದ್ಧಿ ಮಾತ್ರ ನೆಟ್ಟಗಾಗಿಲ್ಲ. ಹಿಜಾಬ್ ಮತ್ತು ಯಾವುದೇ ಧಾರ್ಮಿಕತೆಯನ್ನು ಪ್ರತಿನಿಧಿಸುವ ವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟ ಪಡಿಸಿತ್ತು.
ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಆಲಿಯಾ ಅಸಾದಿ ಮತ್ತು ರೇಷಮ್ ಪ್ರವೇಶ ಪತ್ರ ಪಡೆದು ಬಳಿಕ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆಂದು ಹಠ ಹಿಡಿದಿದ್ದರು. ಆದರೆ ಸರ್ಕಾರ, ಹೈಕೋರ್ಟ್ ಆದೇಶವನ್ನು ಪಾಲಿಸಿದ ಪರೀಕ್ಷಾ ಕೇಂದ್ರ ಇವರ ವಾದವನ್ನು ಕಿವಿಗೊಡಲಿಲ್ಲ. ಪರೀಕ್ಷೆ ಬರೆಯದೆ ಮನೆಗಳಿಗೆ ಹಿಂದಿರುಗಿದ ಆಲಿಯಾ ಅಸಾದಿ ಈ ಕುರಿತು ಟ್ವೀಟ್ ಮಾಡಿದ್ದು ತಮ್ಮ ಆಕ್ರೋಶ ಮತ್ತು ಅಸಮಾಧಾನ ಹೊರಹಾಕಿದ್ದಾರೆ.
ಶುಕ್ರವಾರ ಏಪ್ರಿಲ್ 22 ರಂದು ತಡರಾತ್ರಿ ಅಲಿಯಾ ಅಸ್ಸಾದಿ ಮಾಡಿದ ಟ್ವೀಟ್ನಲ್ಲಿ,’ನನಗೆ ಮತ್ತು ರೇಷಮ್ ಗೆ ಪರೀಕ್ಷೆ ಬರೆಯಲು ಪರೀಕ್ಷಾ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ. ಇದರಿಂದ ನಾವು ಮತ್ತೆ ಮತ್ತೆ ನಿರಾಸೆಗೆ ಒಳಗಾಗುತ್ತಿದ್ದೇವೆ. ಬಿಜೆಪಿ ಶಾಸಕ ರಘುಪತಿ ಭಟ್ ನಮಗೆ ಬೆದರಿಕೆ ಹಾಕಿದ್ದಾರೆ. ಕ್ರಿಮಿನಲ್, ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ನಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಇಲ್ಲಿ ಯಾವ ಅಪರಾಧ ನಡೆದಿದೆ. ನಮ್ಮ ದೇಶ ಎತ್ತ ಸಾಗುತ್ತಿದೆ’ ಎಂದು ಆಲಿಯಾ ಅಸಾದಿ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.