ಮಂಗಳೂರು: ಹಿಮಾಚಲ ಪ್ರದೇಶದಿಂದ ರೈಲು ಮೂಲಕ ನಿಷೇಧಿತ ಗಾಂಜಾ- ಚರಸ್ಗಳನ್ನು ತಂದು ಮಂಗಳೂರಿನ ಉದ್ಯಮಿಗಳು ಮತ್ತು ಕಾಲೇಜು ವಿದ್ಯಾ ರ್ಥಿಗಳಿಗೆ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುಡಾರಿ ಸುಕೇತ್ ಕಾವ, ಕಾರ್ಕಳ ಆನೆಕೆರೆ ನಿವಾಸಿ ಸುನಿಲ್ ಮತ್ತು ತಮಿಳುನಾಡು ರಾಜ್ಯದ ಕೊಯಂಬತ್ತೂರು ನಿವಾಸಿ ಅರವಿಂದ ಬಂಧಿತ ಆರೋಪಿಗಳಾಗಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾ ಲಿ ಎಂಬ ಗುಡ್ಡ ಗಾಡು ಪ್ರದೇಶದ ಜನರಿಂದ ಕಡಿಮೆ ಹಣಕ್ಕೆ ಗಾಂಜಾ-ಚರಸ್ಗಳನ್ನು ಖರೀದಿ ಮಾಡುತ್ತಿದ್ದರು. ತಾವು ಟ್ರಕ್ಕಿಂಗ್ ಮಾಡುವವರು, ಪ್ರವಾಸಿಗರು, ಪ್ರವಾಸಿ ಗೈಡ್ಗಳು ಎಂದೆಲ್ಲಾ ಆ ಜನರನ್ನು ನಂಬಿಸುತ್ತಿದ್ದರು.
ಅಲ್ಲಿನ ಜನರಿಂದ ಕಡಿಮೆ ಬೆಲೆಗೆ ಖರೀದಿಸಿಕೊಂಡು ರೈಲಿನಲ್ಲಿ ಬಂದು ಮಂಗಳೂರಿನ ಉದ್ಯಮಿಗಳು ಮತ್ತು ವ್ಯಾಪಾರಸ್ಥರಿಗೆ ಪೂರೈಸಿ ಅವರ ಮೂಲಕ ಸಾರ್ವಜನಿಕರಿಗೆ ಮತ್ತು ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ತಲುಪುವಂತೆ ಸುಲಭವಾಗಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.