ಬೆಂಗಳೂರು: ಇನ್ನೆರಡು ದಿನಗಳಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಿಗದಿ ಮಾಡುತ್ತಾರೆ. ಸಭೆಯಲ್ಲಿ ಶಾಲೆ ಆರಂಭಿಸುವ ಬಗ್ಗೆ ನಿರ್ಧರಿಸಲಾಗುತ್ತೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿಕೆ ನೀಡಿದ್ದಾರೆ. ಶನಿವಾರ, ಭಾನುವಾರ ತರಗತಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ ಪಠ್ಯ ಕಡಿತದ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಆದರೆ ತಾಂತ್ರಿಕ ಸಲಹಾ ಸಮಿತಿ ಏನು ಹೇಳುತ್ತದೆ ಎಂಬುದನ್ನು ನೋಡಬೇಕು. ಒಂದು ವೇಳೆ ಅವರು ಹಂತ ಹಂತವಾಗಿ ಶಾಲೆ ಆರಂಭಿಸಿ ಅಂದರೆ, 1 ರಿಂದ 2 ಹಾಗೂ 3 ರಿಂದ 5ನೇ ತರಗತಿವರೆಗೆ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಮಾಡ್ತೇವೆ. ಒಂದು ವೇಳೆ ಈ ರೀತಿ ನಿರ್ಧಾರ ಆದರೂ ಸಮಯ ಜಾಸ್ತಿ ತೆಗೆದುಕೊಳ್ಳುವುದಿಲ್ಲ. ಹತ್ತು ದಿನಗಳಲ್ಲಿ ಉಳಿದ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಮಾಡ್ತೇವೆ ಎಂದು ನಾಗೇಶ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಇದುವರೆಗೂ ಶಾಲೆ ಆರಂಭಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದಿಲ್ಲ. ಸಿಎಂ ಸಭೆಗೆ ಸಮಯ ಕೊಟ್ಟ ಕೂಡಲೇ, ತಜ್ಞರಿಂದ ಅಭಿಪ್ರಾಯ ಪಡೆಯುತ್ತೇವೆ. ಆ ನಂತರ ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಮಾಡ್ತೇವೆ. ಈಗಾಗಲೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ದತೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.