



ಬಿಜೆಪಿ ಲೋಕಸಭಾ ಟಿಕೆಟ್ ಕೊಡಿಸುವುದಾಗಿ ಜೆಡಿಎಸ್ ಮಾಜಿ ಶಾಸಕನಿಂದ ಎರಡು ಕೋಟಿ ರು. ಪಡೆದು ವಂಚನೆ ಮಾಡಿದ ಆರೋಪ ಪ್ರಕರಣ ಸಂಬಂಧ ಗೋಪಾಲ ಜೋಶಿ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ನೆರೆಯ ರಾಜ್ಯದಲ್ಲಿ ಬಂಧಿಸಿದ್ದಾರೆ. ಗೋಪಾಲ್ ಜೋಶಿ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮತ್ತೊಬ್ಬ ಆರೋಪಿ ಗೋಪಾಲ್ ಜೋಶಿ ಪುತ್ರನಾಗಿರುವ ಅಜಯ್ ಜೋಶಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿಗಳು ತಲೆಮರೆಸಿಕೊಂಡಿದ್ದರು.
ತನಿಖೆಗಿಳಿದ ಪೊಲೀಸರು ಶುಕ್ರವಾರ ಶೇಖರ್ ನಾಯಕ್ ಮತ್ತು ವಿಜಯಕುಮಾರಿ ಎಂಬುವವರನ್ನು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಗೋಪಾಲ್ ಜೋಶಿ ಬಂಧನಕ್ಕೆ ಹುಡುಕಾಟ ಮುಂದುವರೆಸಿದ್ದರು.ಆರೋಪಿ ಗೋಪಾಲ್ ಜೋಶಿ ಮಹಾರಾಷ್ಟ್ರದ ಕೊಲ್ಹಾಪುರದ ಲಾಡ್ಜ್ವೊಂದರಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು, ಶನಿವಾರ ಕೊಲ್ಹಾಪುರಕ್ಕೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿ ಗೋಪಾಲ್ ಜೋಶಿಯನ್ನು ಹುಬ್ಬಳ್ಳಿ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲೇ ಕೆಲ ಕಾಲ ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.