ಉಡುಪಿ: ಇಂದಿನಿಂದ ಆರಂಭಗೊಂಡಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡುವಂತೆ ಹಿಜಾಬ್ ಹೋರಾಟಗಾರ್ತಿಯರಾದ ಆಲಿಯಾ ಅಸಾದಿ ಹಾಗೂ ರೇಷಂ ಪಟ್ಟು ಹಿಡಿದಿದ್ದರು.
ಉಡುಪಿಯಲ್ಲಿ ಶುರುವಾದಂತ ಹಿಜಾಬ್ ಸಂಘರ್ಷ ರಾಜ್ಯಾಧ್ಯಂತ ವ್ಯಾಪಿಸಿತ್ತು. ಈ ಮಧ್ಯೆ ಹೈಕೋರ್ಟ್ ತ್ರಿಸದಸ್ಯ ನ್ಯಾಯಪೀಠದ ಮಹತ್ವದ ಆದೇಶ ಬಳಿಕ ತಣ್ಣಗಾಗಿತ್ತು. ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿಹಿಡಿದು, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸಿತ್ತು. ಜೊತೆಗೆ ಧಾರ್ಮಿಕ ವಸ್ತ್ರಗಳನ್ನು ಧರಿಸೋದಕ್ಕೆ ಬ್ರೇಕ್ ಹಾಕಲಾಗಿತ್ತು.
ಈ ಬಳಿಕ ಇಂದಿನಿಂದ ಆರಂಭಗೊಂಡಂತ ದ್ವಿತೀಯ ಪಿಯು ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ, ಹಿಜಾಬ್ ಗೆ ಅವಕಾಶವಿಲ್ಲ ಎಂಬುದಾಗಿ ಪಿಯು ಮಂಡಳಿ ಆದೇಶಿಸಿತ್ತು. ಇದರ ನಡುವೆಯೂ ಇಂದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದಂತ ಹಿಜಾಬ್ ಹೋರಾಟಗಾರ್ತಿಯರು ದ್ವಿತೀಯ ಪಿಯು ವಿದ್ಯಾರ್ಥಿನಿ ಆಲಿಯಾ ಅಸಾದಿ ಹಾಗೂ ರೇಷಂ, ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡುವಂತೆ ಹೈಡ್ರಾಮವೇ ನಡೆಸಿದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ತಹಶೀಲ್ದಾರ್ ವಿದ್ಯಾರ್ಥಿನಿಯರಿಗೆ ಕೋರ್ಟ್ ಆದೇಶವನ್ನು ಮನವರಿಕೆ ಮಾಡಿಕೊಟ್ಟು, ಮನವೊಲೀಸೋ ಪ್ರಯತ್ನಕ್ಕೆ ಇಳಿದ್ರು. ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ಮನವಿ ಮಾಡಲಾಯಿತು. ಆದ್ರೇ ತಹಶೀಲ್ದಾರ್ ಮನವೊಲಿಕೆಗೆ ಬಗ್ಗದ ವಿದ್ಯಾರ್ಥಿನಿಯರು, ಹಿಜಾಬ್ ಧರಿಸಿ ಪರೀಕ್ಷೆ ಬರೆಯೋದಕ್ಕೆ ಅವಕಾಶ ನೀಡಿದ್ರೇ ಮಾತ್ರ ಬರೆಯುತ್ತೇವೆ. ಇಲ್ಲವಾದಲ್ಲಿ ಪರೀಕ್ಷೆ ಬರೆಯೋದಿಲ್ಲ ಎಂಬುದಾಗಿ ಮನೆಗೆ ವಾಪಾಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.