
ದಾವಣಗೆರೆ: ಕೌಟುಂಬಿಕ ಕಲಹ ಸಂಬಂಧ ವಿಚಾರಣೆಗೆಂದು ಪೊಲೀಸ್ ಠಾಣೆಗೆ ತೆರಳಿದ್ದ ವ್ಯಕ್ತಿ ನಿಗೂಢವಾಗಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ತಾಲೂಕಿನ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಎನ್ನಲಾಗಿದೆ.

ಈತ 27 ವರ್ಷದ ಹಿಂದೆ ವೃಂದಮ್ಮ ಎಂಬುವವರ ಜೊತೆಗೆ ಮದುವೆಯಾಗಿದ್ದು, 24 ವರ್ಷದ ಮಗಳಿದ್ದಾಳೆ. ಹೀಗಿದ್ದು 18 ವರ್ಷದ ಯುವತಿಯನ್ನು ತನ್ನ ಪತಿ ಮದುವೆಯಾಗಲಿದ್ದಾರೆಂಬ ಮಾಹಿತಿ ಇದ್ದು ನ್ಯಾಯ ದೊರಕಿಸಿಕೊಡಬೇಕು ಎಂದು ಮಾಯಕೊಂಡ ಠಾಣೆಗೆ ದೂರು ನೀಡಿದ್ದರು. ಮಗಳ ವಯಸ್ಸಿಗಿಂತ ಚಿಕ್ಕ ವಯಸ್ಸಿನ ಯುವತಿಯೊಂದಿಗೆ ಮದುವೆಯಾಗಲು ಹೊರಟ ಪತಿಗೆ ಬುದ್ದಿ ಹೇಳಿ ತನ್ನ ಸಂಸಾರ ಸರಿ ಮಾಡಲು ದೂರು ನೀಡಿದ್ದರು.
ವಿಚಾರಣೆಗೆ ಠಾಣೆಗೆ ಕರೆಸಿ ಆತನನ್ನು ಅಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೆ ರಾತ್ರಿ ಏನಾಗಿದೆ ಎಂದು ತಿಳಿಯಲಿಲ್ಲ.ಬೆಳಗ್ಗೆ ಮರುಳಸಿದ್ದಪ್ಪನ ಶವ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ. ಕುಟುಂಬಸ್ಥರು ಇದು ಲಾಕಪ್ ಡೆತ್ ಎಂದು ಆರೋಪಿಸಿ ಪೊಲೀಸ್ ಠಾಣೆ ಬಳಿ ಜಮಾಯಿಸಿ ಪ್ರತಿಭಟಿಸಿದರು. ಈ ಸಂಬಂಧ ವಿಚಾರಣೆ ನಡೆಸಲಾಗುವುದು ಎಂದು ಎಸ್ ಪಿ ಹನುಮಂತರಾಯಪ್ಪ ಭರವಸೆ ನೀಡಿದರು.
