


ಉಪ್ಪಳ: ಉಪ್ಪಳದ ಖಾಸಗಿ ಬ್ಯಾಂಕ್ನ ಎಟಿಎಂಗೆ ತುಂಬಿಸಲೆಂದು ಬಂದ ವಾಹನದಿಂದ 50 ಲಕ್ಷ ರೂ. ಹಣ ದರೋಡೆಯಾದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ದರೋಡೆಯನ್ನು ತಮಿಳುನಾಡಿನ ತಿರುಟ್ ತಂಡದವರು ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದೆ.
ಕಳವು, ದರೋಡೆ ಸೇರಿ ಸ್ಪಿರಿಟ್ ಸಾಗಾಟ ದಂಧೆ ತಿರುಟ್ ತಂಡದ ಪ್ರಮುಖ ದಂಧೆಯಾಗಿದೆ. ಈ ಎಲ್ಲಾ ಕೃತ್ಯಗಳನ್ನು ನಡೆಸಿ ಇವರೆಲ್ಲರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.ತಮಿಳುನಾಡಿನ ಈ ತಿರುಟ್ ತಂಡದಲ್ಲಿ ಸುಮಾರು 30 ಮಂದಿ ಇದ್ದಾರೆ ಎನ್ನಲಾಗಿದೆ.
ಈ ತಂಡದವರು ಒಂದೇ ಸ್ಥಳದಲ್ಲಿ ನಿಲ್ಲದೆ ಅಲೆಮಾರಿಗಳಂತೆ ಅಲೆದಾಡುತ್ತಿರುತ್ತಾರೆ. ದರೋಡೆ ಮಾಡುವ ಮುಂಚೆ ಸ್ಥಳವನ್ನು ಪರಿಚಯ ಮಾಡಿ, ಪ್ಲಾನ್ ಹಾಕುತ್ತಾರೆ. ತಿರುಟ್ ತಂಡ ಎಟಿಎಂಗೆ ತುಂಬಿಸಲು ತಂದಿದ್ದ ಹಣವನ್ನು ಕಳವು ಮಾಡಲು ಮಂಗಳೂರಿನಿಂದ ಬಂದು ಕಳವು ಮಾಡಿದ ಬಳಿಕ ಆಟೋದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನು ಕಾಸರಗೋಡಿನಿಂದ ರೈಲಿನಲ್ಲಿ ಎಲ್ಲಿಗೆ ಹೋದರೆಂದು ಪೊಲೀಸರಿಗೆ ತಿಳಿದುಬಂದಿಲ್ಲ. ಈ ಹಿನ್ನೆಲೆ ಕೇರಳ ಪೊಲೀಸರು ಕರ್ನಾಟಕ, ತಮಿಳುನಾಡು ಪೊಲೀಸರ ನೆರವು ಕೋರಿದ್ದಾರೆ.