



ಮಂಗಳೂರು: ರಾತ್ರಿವೇಳೆ ಅನುಮಾನಾಸ್ಪದವಾಗಿ ತಿರುಗುವ ವಾಹನಗಳ ತಪಾಸಣೆ ನಡೆಸುತ್ತಿದ್ದ ಕಾನ್ಸ್ಟೇಬಲ್ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ದೃಶ್ಯ ಸಮೀಪದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ನಗರದ ಉರ್ವ ಕೋಡಿಕಲ್ ನಾರಾಯಣಗುರು ಕೋ–ಆಪರೇಟಿವ್ ಸೊಸೈಟಿ ಬಳಿ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಭಾನುವಾರ ಮುಂಜಾಣೆ 2 ಗಂಟೆ ಸುಮಾರಿಗೆ ಕರ್ತವ್ಯ ನಿರತರಾಗಿದ್ದ ವೇಳೆ ದ್ವಿಚಕ್ರವಾಹನವೊಂದು ಅತಿವೇಗವಾಗಿ ಸಾಗಿತ್ತು. ವಾಹನ ನಿಲ್ಲಿಸುವಂತೆ ಪೊಲೀಸರು ನೀಡಿದ ಸೂಚನೆಯನ್ನು ಪಾಲಿಸದೆಯೇ ಯುವಕರು ಮುಂದಕ್ಕೆ ಹೋಗಿದ್ದರು. ಸ್ವಲ್ಪ ಸಮಯದ ನಂತರ ಅದೇ ಮಾರ್ಗದಲ್ಲಿ ಬಂದ ಯುವಕರು ಸಿಮೆಂಟ್ ಶೀಟ್ನ ತುಂಡೊಂದರಿಂದ ಪೊಲೀಸ್ ಕಾನ್ಸ್ಟೆಬಲ್ ಹಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪೊಲೀಸ್ ಕಾನ್ಸ್ಟೆಬಲ್ ಬಾಗಿ ಏಟಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೂ ಹಲ್ಲೆಯಿಂದ ಅವರ ತಲೆಗೆ ಗಾಯವಾಗಿದೆ ಎಂದು ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








