
ತಿರುವನಂತಪುರಂ, ಜೂ. 3: ಕುಂಭಮೇಳ ಖ್ಯಾತಿಯ ಮೊನಾಲಿಸಾ ಭೋಸ್ಲೆಯನ್ನು ಅಪಹರಿಸಲಾಗಿದೆ ಹಾಗೂ ಮೊನಾಲಿಸಾ ಭೋಸ್ಥೆ ಮತ್ತು ಫರ್ಮಾನ್ ಖಾನ್ ನಡುವಿನ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಮಧ್ಯಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ, ಫರ್ಮಾನ್ ಖಾನ್ ಗೆ ಕೇರಳ ಹೈಕೋರ್ಟ್ ಬುಧವಾರ ಒಂದು ತಿಂಗಳ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೌಸೇರ್ ಎಡಪ್ಪಗಾತ್, ನಿರೀಕ್ಷಣಾ ಜಾಮೀನಿಗಾಗಿ ಮಧ್ಯಪ್ರದೇಶದಲ್ಲಿನ ವ್ಯಾಪ್ತಿಯ ನ್ಯಾಯಾಲಯದ ಮೊರೆ ಹೋಗುವಂತೆ ಫರ್ಮಾನ್ ಖಾನ್ಗೆ ಸೂಚಿಸಿದರು. ಮಧ್ಯಪ್ರದೇಶ ನ್ಯಾಯಾಲಯದ ಮುಂದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವವರೆಗೆ ಒಂದು ತಿಂಗಳ ಅವಧಿಯಲ್ಲಿ ಅವರನ್ನು ಬಂಧಿಸಬಾರದು ಎಂದು ನ್ಯಾಯಾಲಯ ಆದೇಶಿಸಿತು.2025ರಲ್ಲಿ ನಡೆದಿದ್ದ ಕುಂಭಮೇಳದ ವೇಳೆ ಮಣಿಗಳನ್ನು ಮಾರುತ್ತಿದ್ದ ಮೊನಾಲಿಸಾ ಭೋಸ್ಲೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಆಕೆ ಖ್ಯಾತಿಗೆ ಬಂದಿದ್ದರು.
ಈ ವರ್ಷ ಕೇರಳದಲ್ಲಿ ಫರ್ಮಾನ್ ಖಾನ್ ಅವರನ್ನು ಆಕೆ ವಿವಾಹವಾಗಿದ್ದರು. ಅವರ ಅಂತರ್ಧಮೀ್ರಯ ವಿವಾಹವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಪಡೆದಿತ್ತು. ಆದರೆ, ಮೊನಾಲಿಸಾ ಭೋಸ್ಲೆಗೆ ಇನ್ನೂ 16 ವರ್ಷ ಮಾತ್ರ ವಯಸ್ಸಾಗಿದ್ದು, ಈ ವರ್ಷ ಫರ್ಮಾನ್ ಖಾನ್ ಅವರನ್ನು ವಿವಾಹವಾದಾಗ ಆಕೆಗೆ ಕಾನೂನಾತ್ಮಕ ವಿವಾಹ ವಯಸ್ಸು ಪ್ರಾಪ್ತವಾಗಿರಲಿಲ್ಲ ಎಂಬ ವಿವಾದ ಭುಗಿಲೆದ್ದಿತ್ತು. ಅವರ ವಿವಾಹದ ಕಾನೂನಾತ್ಮಕತೆ ಕುರಿತು ಪ್ರಶ್ನೆಗಳು ಉದ್ಭವಿಸಿದ್ದಲ್ಲದೆ, ಈ ವಿವಾಹವು POCSO ಕಾಯ್ದೆಯ ವ್ಯಾಪ್ತಿಗೆ ಒಳಪಡಬಹುದೇ ಎಂಬ ಚರ್ಚೆಯೂ ಆರಂಭವಾಗಿತ್ತು. ಫರ್ಮಾನ್ ಖಾನ್ ವಿರುದ್ಧ ಪೊಲೀಸರಿಗೆ ಅಪಹರಣದ ದೂರು ನೀಡಿದ್ದರು.
ಬಂಧನದಿಂದ ಪಾರಾಗಲು ದಂಪತಿ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ನ ಮೊರೆ ಹೋಗಿದ್ದು, ಮೊನಾಲಿಸಾ ಅಪ್ರಾಪ್ತ ಎಂಬ ಆರೋಪವನ್ನು ತಮ್ಮ ಅರ್ಜಿಯಲ್ಲಿ ಅಲ್ಲಗಳೆದಿದ್ದರು. ಆದರೆ, ದಂಪತಿಯ ಅರ್ಜಿ ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದ್ದ ಮಧ್ಯಪ್ರದೇಶ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು, ಫರ್ಮಾನ್ ಖಾನ್ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿರುವುದರಿಂದ ನಿರೀಕ್ಷಣಾ ಜಾಮೀನಿಗಾಗಿ ಮಧ್ಯಪ್ರದೇಶದ ನ್ಯಾಯಾಲಯವೊಂದರ ಮೊರೆ ಹೋಗಬೇಕು ಎಂದು ವಾದ ಮಂಡಿಸಿದರು
.ಇದಕ್ಕೆ ಪ್ರತಿಯಾಗಿ, ಮಧ್ಯಪ್ರದೇಶದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೆ ಬಂಧನವಾಗುವ ಭೀತಿ ಇರುವುದರಿಂದ ಕೇರಳ ಹೈಕೋರ್ಟ್ಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ದಂಪತಿ ವಾದ ಮಂಡಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಮಂಗಳವಾರ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಫರ್ಮಾನ್ ಖಾನ್ಗೆ ಒಂದು ತಿಂಗಳ ಅವಧಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು.








