
ಕಾಸರಗೋಡು: ರೈಲಿನಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಬೆದರಿಕೆ ಕರೆ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕಾಞಂಗಾಡ್ ಬಂಗಳಂ ನಿವಾಸಿ ರತೀಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.ಬುಧವಾರ ರಾತ್ರಿ ಸುಮಾರು 7.30ರ ವೇಳೆಗೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ರತೀಶ್, ಮಲಬಾರ್ ಎಕ್ಸ್ಪ್ರೆಸ್ನಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಹಾಕಿದ್ದಾನೆ. ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ, ಬಾಂಬ್ ಸ್ಕಾಡ್ ಹಾಗೂ ಶ್ವಾನದಳದ ನೆರವಿನಿಂದ ಕಾಞಂಗಾಡ್ ರೈಲು ನಿಲ್ದಾಣದಲ್ಲಿದ್ದ ವಿವಿಧ ರೈಲುಗಳಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ ಯಾವುದೇ ಬಾಂಬ್ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.



ಬಳಿಕ ಬೆದರಿಕೆ ಕರೆ ಬಂದ ಮೊಬೈಲ್ಫೋನ್ನ ಸ್ಥಳವನ್ನು ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಕಾಞಂಗಾಡ್ ಪ್ರದೇಶದಲ್ಲಿರುವುದು ಪತ್ತೆಯಾಗಿದೆ. ಕಾಞಂಗಾಡ್ ಡಿವೈಎಸ್ಪಿ ಅನಿಲ್ ಕುಮಾರ್ ಹಾಗೂ ಸಿಐ ದಿನೇಶ್ ನೇತೃತ್ವದ ತಂಡ ಮಾವುಂಗಾಲ್ ಮೇಲ್ವೇತುವೆ ಸಮೀಪ ರತೀಶ್ನನ್ನು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಂಡ ಬಳಿಕ ನೋಟಿಸ್ ನೀಡಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ








