

ಗುವಾಹತಿ: ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 258ಕ್ಕೇರಿದೆ. ಹಿಂಸಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ 90 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಪ್ರಕಟಿಸಿದ್ದಾರೆ.
ಮಣಿಪುರದಲ್ಲಿ ನಿಯೋಜಿಸಲಾಗಿರುವ 198 ತುಕಡಿಗಳ ಜತೆಗೆ ಈ ತುಕಡಿಗಳನ್ನು ನಿಯೋಜಿಸಲಾಗಿದೆ. “ಸಿಎಪಿಎಫ್ ನ 90 ತುಕಡಿಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಈ ಮೊದಲು ರಾಜ್ಯಕ್ಕೆ 198 ತುಕಡಿಗಳನ್ನು ಕಳುಹಿಸಿಕೊಡಲಾಗಿತ್ತು. ಈ ಪೈಕಿ ಬಹುತೇಕ ತುಕಡಿಗಳು ಈಗಾಗಲೇ ಇಂಫಾಲಕ್ಕೆ ಆಗಮಿಸಿವೆ. ಜೀವ ಮತ್ತು ಆಸ್ತಿಗಳನ್ನು ರಕ್ಷಿಸುವ ಸಲುವಾಗಿ ಇವುಗಳನ್ನು ನಿಯೋಜಿಸಲಿದ್ದೇವೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪ್ರತಿ ಜಿಲ್ಲೆಯಲ್ಲಿ ಅಧಿಕಾರಿಗಳು ಸಮನ್ವಯ ಸೆಲ್ ಗಳನ್ನು ಮತ್ತು ಜಂಟಿ ನಿಯಂತ್ರಣ ಕೊಠಡಿಗಳನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಭದ್ರತಾ ವ್ಯವಸ್ಥೆ ಪರಾಮರ್ಶೆ ಸಭೆಯ ಬಳಿಕ ಹೇಳಿದರು. ಸೇನೆ, ಗಡಿಭದ್ರತಾ ಪಡೆ, ಸಿಆರ್ಪಿಎಫ್, ಅಸ್ಸಾಂ ರೈಫಲ್ಸ್, ಎಸ್ಎಸ್ಟಿ ಐಟಿಬಿಪಿ ಮತ್ತು ಮಣಿಪುರ ಪೊಲೀಸ್ ಪಡೆಯ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.ಪಡೆಗಳ ನಿಯೋಜನೆ ಮತ್ತು ಸಮನ್ವಯಕ್ಕಾಗಿ ಹಲವು ಎಸ್ಓಪಿಗಳನ್ನು ಸಿದ್ಧಪಡಿಸಲಾಗಿದೆ. ಗಲಭೆಪೀಡಿತ ಪ್ರದೇಶಗಳ ಭದ್ರತೆಗಾಗಿ, ರಾಷ್ಟ್ರೀಯ ಹೆದ್ದಾರಿ ಭದ್ರತೆ ಮತ್ತು ಇತರ ಪ್ರಮುಖ ಸ್ಥಳಗಳ ಭದ್ರತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.