


ವಿಟ್ಲ : ನಗರೋತ್ಥಾನ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯ ಸಮಯದಲ್ಲಿ ಕಡೆಗಣಿಸಿದ್ದಾರೆ ಎಂದು ಬಿಜೆಪಿ ವಾರ್ಡ್ ಸದಸ್ಯರು ವಿಟ್ಲದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ವಿಟ್ಲ ಪ.ಪಂ.ನ ಒಟ್ಟು 18 ಮಂದಿ ಚುನಾಯಿತ ಸದಸ್ಯರ ಪೈಕಿ 12 ಮಂದಿ ಬಿಜೆಪಿ ಪಕ್ಷದಿಂದ ಚುನಾಯಿತರಾದ ಪಟ್ಟಣ ಪಂಚಾಯತ್ ಸದಸ್ಯರಿದ್ದು ಇತರರಂತೆ ಪ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಕ್ರಮಬದ್ದವಾಗಿ ಚುನಾಯಿತರಾದ ಸದಸ್ಯರಾಗಿತ್ತೇವೆ. ಆದುದರಿಂದ ವಿಟ್ಲ ಪ.ಪಂ.ಗೆ ಸಂಬಂಧಪಟ್ಟ ಯಾವುದೇ ಅನುದಾನವನ್ನು ಹಂಚಿಕೆ ಹಾಕುವಾಗ ಅಥವಾ ಅದಕ್ಕೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ತಯಾರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಸದಸ್ಯ ಹಾಗೂ ಪ್ರತೀ ವಾರ್ಡಿಗೆ ಆದ್ಯತೆ ನೀಡಿ ಯಾವ ಸದಸ್ಯನಿಗೂ ವಂಚನೆಯಾಗದಂತೆ ಕ್ರಿಯಾಯೋಜನೆ ತಯಾರಿಸಬೇಕಾಗಿರುವುದು ಮುಖ್ಯಧಿಕಾರಿಯವರ ಜವಾಬ್ದಾರಿಯಾಗಿರುತ್ತದೆ.

ಆದರೆ ವಿಟ್ಲ ಪ.ಪಂ.ನಲ್ಲಿ ಇತ್ತೀಚೆಗೆ ಕ್ರಿಯಾಯೋಜನೆ ತಯಾರಿಸುವಾಗ ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯರಿರುವ ವಾರ್ಡುಗಳಿಗೆ ಮಾತ್ರ ಆದ್ಯತೆ ನೀಡಿ, ನಾವು ಬಿಜೆಪಿ ಪಕ್ಷದಿಂದ ಗೆದ್ದಿರುವ ಸದಸ್ಯರಿರುವ ವಾರ್ಡುಗಳನ್ನು ನಿರ್ಲಕ್ಷಿಸಲಾಗಿದೆ. ನಗರೋತ್ಥಾನದ ರೂ.74.01 ಲಕ್ಷ ಅನುದಾನವನ್ನು ಈ ಹಿಂದಿನ ಶಾಸಕರ ಅವಧಿಯಲ್ಲಿ ಕ್ರಿಯಾಯೋಜನೆ ತಯಾರಿಸಿ 4 ಕಡೆಗಳಲ್ಲಿ ಸ್ವಾಗತ ಕಮಾನು ರಚನೆಗೆ ರೂ.20 ಲಕ್ಷ ಹಾಗೂ ನೂತನ ವಾಣಿಜ್ಯ ಕಟ್ಟಡ ರಚನೆಗೆ ರೂ.54.01 ಲಕ್ಷ ಎಂದು ವಿಂಗಡಿಸಲಾಗಿತ್ತು. ಈಗ ಅದನ್ನು ಬದಲಾವಣೆ ಮಾಡಿ ನಮ್ಮ ಗಮನಕ್ಕೆ ತಾರದೆ ಬೇರೆ ಕಾಮಗಾರಿಗಳಿಗೆ ಈ ಮೊತ್ತವನ್ನು ಮೀಸಲಿಡಲಾಗಿದೆ.
ಅದೇ ರೀತಿಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ 2020-21ನೇ ಸಾಲಿನ ಉಳಿಕೆ ರೂ. 18.63 ಲಕ್ಷ 2021-22ನೇ ಸಾಲಿನ ಬಾಬ್ತು ರೂ. 7.06 ಲಕ್ಷ ಬದಲಿ ಕಾಮಗಾರಿಯ ಬಾಬ್ತು ಉಳಿಕೆ ಮೊತ್ತ ರೂ. 7.50 ಲಕ್ಷ, 2022-23ನೇ ಸಾಲಿನ ಉಳಿಕೆ ಮೊತ್ತ ರೂ. 9.29 ಲಕ್ಷ ಹೀಗೆ ಒಟ್ಟು ರೂ. 42.48 ಲಕ್ಷ ರೂ. ಮೊತ್ತ ಲಭ್ಯವಿದ್ದು ಇದಕ್ಕೆ ಕೂಡಾ ಕ್ರಿಯಾಯೋಜನೆ ತಯಾರಿ ಆಗಬೇಕಾಗಿದೆ. ವಿಟ್ಲ ಪ.ಪಂ.ನಲ್ಲಿ 2/3 ಬಹುಮತವನ್ನು ಹೊಂದಿರುವ ನಮ್ಮ ಪಕ್ಷದ ಚುನಾಯಿತ ಸದಸ್ಯರನ್ನು ಈ ರೀತಿ ಕಡೆಗಣಿಸುವುದು ನ್ಯಾಯ ಸಮ್ಮತವಾಗಿರುವುದಿಲ್ಲ. ಈ ವ್ಯವಸ್ಥೆಯು ಇದೇ ರೀತಿ ಮುಂದುವರಿದಲ್ಲಿ ನಾವು 12 ಮಂದಿ ಚುನಾಯಿತ ಸದಸ್ಯರು ವಿಟ್ಲ ಪ.ಪಂ.ಮುಂಭಾಗದಲ್ಲಿ ಧರಣಿ ನಡೆಸಬೇಕಾಗುತ್ತದೆ ಮತ್ತು ನ್ಯಾಯ ಸಿಗುವ ತನಕ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಅರುಣ್, ಅಶೋಕ್ ಕುಮಾರ್ ಶೆಟ್ಟಿ, ರವಿ ಪ್ರಕಾಶ್, ಹರೀಶ್ ಸಿ.ಎಚ್, ಕರುಣಾಕರ, ಎನ್.ಕೃಷ್ಣ, ಸಿ.ಹೆಚ್ ಜಯಂತ, ವಸಂತ, ಸಂಗೀತ, ವಿಜಯಲಕ್ಷ್ಮೀ, ರಕ್ಷಿತಾ, ಸುನೀತ ಉಪಸ್ಥಿತರಿದ್ದರು.