ವಿಟ್ಲ: ರೈತರಿಂದ ಆಯ್ಕೆಯಾದ ಬಿಜೆಪಿ ಸರ್ಕಾರ ರೈತರ ಪರವಾಗಿ ನಿರಂತರವಾಗಿದೆ. ಗ್ರಾಮೀಣ ಪ್ರದೇಶದ ರೈತರ, ಜನರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಸದಸ್ಯತ್ವ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಸಮಾಜದಲ್ಲಿ ಸೇವಾ ಮನೋಭಾವದ ಮೂಲಕ ಕಾರ್ಯಕರ್ತರು ಕಾರ್ಯ ನಿರ್ವಹಿಸಬೇಕು. ಶಕ್ತಿಶಾಲಿ ಸ್ವಾಭಿಮಾನ ಭಾರತದ ನಿರ್ಮಾಣವಾಗಬೇಕೆಂಬ ಕನಸನ್ನು ಬಿಜೆಪಿ ಹೊಂದಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಭಾನುವಾರ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ, ವಿಟ್ಲ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಭೆಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ ಸಾಮೂಹಿಕ ತೀರ್ಮಾನವನ್ನು ಗೌರವಿಸಿ ಮುನ್ನಡೆಯುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರೂ ಮಾಡಬೇಕು. ಸಮಾಜದ ಮಧ್ಯೆ ಕಷ್ಟದಲ್ಲಿ ಇರುವವರ ಬಗ್ಗೆ ಗಮನಕೊಟ್ಟು ಸರ್ಕಾರದ ಯೋಜನೆ ತಲುಪಿಸುವ ಕಾರ್ಯದಿಂದ ಬಿಜೆಪಿ ಬೆಳೆಯಲು ಸಾಧ್ಯವಾಗಿದೆ. ಜವಾಬ್ದಾರಿಗೆ ಹೋಗುವ ಮೊದಲು ನಮ್ಮನ್ನು ನಾವು ತಯಾರು ಮಾಡಿಕೊಂಡಿದ್ದೇವಾ ಎಂದು ಅವಲೋಕಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವಿಟ್ಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಕರುಣುಕಾರ ನಾಯ್ತೊಟ್ಟು, ಸದಸ್ಯ ಜಗದೀಶ್ ಪಾಣೆಮಜಲು, ವಿಟ್ಲ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಂತ್ ಉಪಸ್ಥಿತರಿದ್ದರು.
ಗೋವರ್ಧನ ಕುಮಾರ್ ಪ್ರಾರ್ಥಿಸಿದರು. ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ ಸ್ವಾಗತಿಸಿದರು. ಪುತ್ತೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಪದಾಧಿಕಾರಿಗಳ ಪರಿಚಯ ಮಾಡಿದರು. ಪಟ್ಟಣ ಪಂಚಾಯಿತಿ ಸದಸ್ಯ ರಾಮದಾಸ ಶೆಣೈ ವಂದಿಸಿದರು. ಪುತ್ತೂರು ಮಂಡಲ ಸದಸ್ಯ ಮೋಹನದಾಸ ಉಕ್ಕುಡ ಕಾರ್ಯಕ್ರಮ ನಿರೂಪಿಸಿದರು.