Saturday, June 28, 2025
spot_imgspot_img
spot_imgspot_img

ಬಿಜೆಪಿಯಿಂದ ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ

- Advertisement -
- Advertisement -

ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ನ ಮಾಜಿ ಅಧ್ಯಕ್ಷ, ಸಮಾಜ ಸೇವಕಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ಬಿಜೆಪಿ ಪಕ್ಷದಿಂದ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದು, ‘ಭಾರತದ ರಾಷ್ಟ್ರಪತಿಗಳು ಶ್ರೀಮತಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ. ಸಮಾಜಸೇವೆ, ಲೋಕೋಪಕಾರ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸುಧಾಜಿಯವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ ‘ನಾರಿ ಶಕ್ತಿ’ಗೆ ಪ್ರಬಲವಾದ ಸಾಕ್ಷಿಯಾಗಿದೆ, ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಉದಾಹರಿಸುತ್ತದೆ. ಅವರ ಸಂಸದೀಯ ಅವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ’ ಎಂದು ಮೋದಿ ಬರೆದಿದ್ದಾರೆ.

ಸಮಾಜಸೇವೆ ವಿಭಾಗದಲ್ಲಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ಈಗ ಒಂದೇ ನಿಮಿಷದ ಹಿಂದೆ ಸುದ್ದಿ ಗೊತ್ತಾಯಿತು. ಎಲ್ಲರ ಅಭಿಮಾನವೂ ಇರಲಿ. ನನ್ನಿಂದ ಏನಾದರೂ ದೇಶಕ್ಕೆ ಸಹಾಯವಾಗಲಿ ಎಂದಷ್ಟೇ ಬಯಸುತ್ತೇನೆ. ನಾನು ಪ್ರಸ್ತುತ ದೇಶದಲ್ಲಿಲ್ಲ. ವಿದೇಶದಲ್ಲಿದ್ದೇನೆ. ಈ ಬಗ್ಗೆ ನಾನು ನಿರೀಕ್ಷೆ ಮಾಡಿರಲಿಲ್ಲ.ನಮ್ಮ ಕುಟುಂಬದಲ್ಲಿ ಯಾರಿಗೂ ಈ ವಿಚಾರ ತಿಳಿದಿಲ್ಲ. ಮಾಧ್ಯಮಗಳಿಂದ ಈ ವಿಚಾರ ತಿಳಿಯುವ ಮುನ್ನ ಅವರಿಗೆ ತಿಳಿಸಬೇಕಿದೆ. ಇಂದು ಮೋದಿಜೀ ಅವರ ಟ್ವೀಟ್‌ ನೋಡಿದ ಬಳಿಕವೇ ನನಗೆ ಈ ವಿಚಾರ ತಿಳಿಯಿತು. ಅವರಿಗೆ ಈ ಸಮಯದಲ್ಲಿ ಧನ್ಯವಾದ ತಿಳಿಸಲು ಬಯಸುತ್ತೇನೆ. ನನ್ನ ಕೈಲಿ ಆದಷ್ಟು ಚೆನ್ನಾಗಿ ಕೆಲಸ ಮಾಡಬೇಕು ಎಂದು ಬಯಸಿದ್ದೇನೆ. ಅದಕ್ಕಿಂತ ಹೊರತಾಗಿ ಏನೂ ನಿರೀಕ್ಷೆ ಇಟ್ಟಿಲ್ಲ. ರಾಜಕಾರಣಕ್ಕೆ ಬರುವ ನಿರೀಕ್ಷೆಯನ್ನು ನಾನು ಯಾವಾಗಲೂ ಇರಿಸಿಕೊಂಡಿರಲಿಲ್ಲ ಎಂದು ಸುಧಾಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

Related news

error: Content is protected !!