ಬೆಂಗಳೂರು: ನಿನ್ನೆ ರಾತ್ರಿ ಸುಮಾರು 9ಗಂಟೆಯ ವೇಳೆಗೆ ಬೆಂಗಳೂರನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಹತ್ಯೆಯೊಂದು ಕಬ್ಬನ್ ಪಾರ್ಕ್ ಸರಹದ್ದಿನ ಪೋಲೀಸ್ ಠಾಣೆಯಲ್ಲಿ ನಡೆದಿತ್ತು. ಡ್ಯುಯೆಟ್ ಬಾರ್ ನ ಮಾಲಿಕರಾದ ಮನೀಶ್ ಶೆಟ್ಟಿ ತಮ್ಮ ಬಾರ್ ನ ಮುಂಭಾಗದಲ್ಲಿದ್ದ ಸಮಯದಲ್ಲಿ ಬೈಕಿನಲ್ಲಿ ಬಂದ ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದರು. ಪೊಲೀಸರು ಈ ಬಗ್ಗೆ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.
ಇದೀಗ ಮನೀಶ್ ಶೆಟ್ಟಿ ಹತ್ಯೆಯನ್ನು ನಾನೇ ಮಾಡಿಸಿದ್ದು ಎಂದು ಭೂಗತ ಡಾನ್ ವಿಕ್ಕಿ ಶೆಟ್ಟಿ ಖಾಸಗಿ ವಾಹಿನಿಯೊಂದಕ್ಕೆ ಕಾಲ್ ಮೂಲಕ ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮೊದಲಿನಿಂದಲೂ ವಿಕ್ಕಿ ಶೆಟ್ಟಿ ಮತ್ತು ರವಿ ಪೂಜಾರಿ ಗ್ಯಾಂಗ್ ಗಳ ನಡುವೆ ದ್ವೇಷವಿದ್ದು ಕೆಲವು ಕೊಲೆಗಳು ನಡೆದ ಪ್ರಕರಣಗಳಿವೆ. ಮನೀಶ್ ಶೆಟ್ಟಿ ಕೂಡ ಭೂಗತ ಪಾತಕಿ ರವಿ ಪೂಜಾರಿಯ ಗ್ಯಾಂಗ್ ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಮನೀಶ್ ಶೆಟ್ಟಿಯ ಶೂಟೌಟ್ ನಡೆದ ಕೆಲವೇ ಗಂಟೆಗಳಲ್ಲಿ ಭೂಗತ ಡಾನ್ ವಿಕ್ಕಿ ಶೆಟ್ಟಿಯ ಕರೆ ಬಂದಿದೆ ಎನ್ನಲಾಗಿದೆ.
ಭೂಗತ ಲೋಕದ ಸಂಪರ್ಕ ಹೊಂದಿದ್ದ ಮನೀಶ್ ಶೆಟ್ಟಿಯ ಮೇಲೆ ಸುಮಾರು 30 ಕ್ಕೂ ಅಧಿಕ ಪ್ರಕರಣಗಳು ಬೇರೆ ಬೇರೆ ಠಾಣೆಯಲ್ಲಿ ದಾಖಲಾಗಿವೆ. 2011 ರಲ್ಲಿ ವಿಟ್ಲ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಮನೀಶ್ ಶೆಟ್ಟಿ ಸೇರಿದಂತೆ ರವಿ ಪೂಜಾರಿ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.
2006 ರಲ್ಲಿ ಚೆಮ್ಮನೂರ್ ಜ್ಯುವೆಲ್ಲರಿ ದರೋಡೆ ಪ್ರಕರಣ ಬೆಂಗಳೂರನ್ನೆ ಬೆಚ್ಚಿಬೀಳಿಸುವಂತೆ ಮಾಡಿತ್ತು. ಬೆಳಗಾಂನ ಎಸ್ ಬಿ ಐ ಬ್ಯಾಂಕ್ ದರೋಡೆ ಹಾಡು ಹಗಲೇ ನಡೆದಿತ್ತು. ಈ ಪ್ರಕರಣದಲ್ಲಿ ಮನೀಶ್ ಶೆಟ್ಟಿ 9 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ.ನಂತರ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮ ಹಾಗು ಇನ್ನಿತರ ವ್ಯವಹಾರಗಳನ್ನು ನಡೆಸುತ್ತಿದ್ದ. ಭೂಗತ ಲೋಕದ ನಂಟು ಹೊಂದಿದ್ದ ಮನೀಶ್ ಶೆಟ್ಟಿ ರವಿ ಪೂಜಾರಿ ಗ್ಯಾಂಗ್ ನಲ್ಲಿ ಮೊದಲು ಪ್ರಮುಖನಾಗಿದ್ದು ನಂತರದ ದಿನಗಳಲ್ಲಿ ಬನ್ನಂಜೆ ರಾಜನ ಜೊತೆ ಆಪ್ತನಾಗಿದ್ದ.
ಭೂಗತ ಜಗತ್ತಿನಲ್ಲಿ ಎಷ್ಟು ಹೆಸರು ಮಾಡಿದರೂ ದುಷ್ಕರ್ಮಿಗಳು ಮನೀಶ್ ಶೆಟ್ಟಿಯನ್ನು ಆತನ ಬಾರ್ ಮುಂದೆಯೇ ಸಿಂಗಲ್ ಬ್ಯಾರಲ್ ಗನ್ ನಲ್ಲಿ ಹಿಂಬದಿಯಿಂದ ಶೂಟ್ ಮಾಡಿದ್ದರು.ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಚಾಕುವಿನಿಂದ ಇರಿದಿದ್ದಾರೆ. ರಕ್ತಸ್ರಾವವಾಗಿ ಮನೀಶ್ ಶೆಟ್ಟಿ ಸ್ಥಳದಲ್ಲೇ ಬಿದ್ದಿದ್ದಾರೆ.ಹಂತಕರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಇದೀಗ ಹಂತಕರ ಬಲೆಗೆ ಪೊಲೀಸರು ಒಂಭತ್ತು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.