ಮಂಗಳೂರು(ಅ.17): ನಕಲಿ ಪರ್ಮಿಟ್ ತೋರಿಸಿ ಹಾಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಸಂಬಂಧಿಕರು ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವ ರಮಾನಾಥ್ ರೈ ಮಾಡಿದ್ದಾರೆ.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಬಿ ರಮಾನಾಥ್ ರೈ ಅವರು, ಮುಡಿಪು ಪ್ರದೇಶದಲ್ಲಿ ಕೆಂಪು ಮಣ್ಣು ಗಣಿಗಾರಿಕೆ ವಿಚಾರವಾಗಿ ಮಾತನಾಡಿ, ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಡಿಪು ಗ್ರಾಮದಲ್ಲಿ ಹೇರಳವಾಗಿರುವ ರೆಡ್ ಪಾಕ್ಸೈಟ್ ಮಣ್ಣಿನ ಗಣಿಗಾರಿಕೆಯನ್ನು ಶಾಸಕರ ಸಂಬಂಧಿಕರು ನಡೆಸುತ್ತಿದ್ದು, ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಭಾರೀ ನಷ್ಟವಾಗುತ್ತಿದೆಯಲ್ಲದೆ ಕಡಿಮೆ ಪರ್ಮೀಟ್ ನಲ್ಲಿ ಹೆಚ್ಚು ಮಣ್ಣಿನ ಗಣಿಗಾರಿಕೆಯಾಗುತ್ತಿದ್ದು, ಯಥೇಚ್ಛವಾಗಿ ಮಣ್ಣು ಸಾಗಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ದಂಧೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕೇರಳದ ಜನರೂ ಶಾಮೀಲಾಗಿದ್ದು, ಗಂಜಿಮಠದಲ್ಲಿ ಗಣಿಗಾರಿಕೆಗೆ ಪರ್ಮಿಟ್ ಪಡೆದು ಬೇರೆ ಕಡೆಯಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಆಡಳಿತ ಪಕ್ಷ ಬಿಜೆಪಿಯ ಹಾಲಿ ಶಾಸಕರ ಕುಟುಂಬದವರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದ ಅವರು, ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ಇನ್ಫೋಸಿಸ್ ಕಂಪೆನಿ ಕೂಡಾ ಇದೆ, ಈ ಹಿಂದಿನ ಎಸಿ ಮದನ್ ಕುಮಾರ್ ಈ ಅಕ್ರಮ ಪ್ರದೇಶಕ್ಕೆ ರೈಡ್ ಮಾಡಿದ್ದರಿಂದ ಅವರನ್ನು ಈಗ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯಕ್ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಈ ದಂಧೆಯ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖೆ ಮಾಡಬೇಕು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ತನಿಖೆಯಾಗಬೇಕು ಅಲ್ಲದೇ ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಬೇಕು ಎಂದು ರಮಾನಾಥ ರೈ ಅವರು ಆಗ್ರಹಿಸಿದ್ದಾರೆ.