

ಪ್ರದೀಪ್ ಈಶ್ವರ್ VS ಡಾ. ಕೆ. ಸುಧಾಕರ್ ಅವರ ನಡುವೆ ಮಾತಿನ ಯುದ್ಧ ಬಲು ಜೋರಾಗಿ ನಡೆಯುತ್ತಾ ಬಂದಿದೆ. ಅದ್ರಲ್ಲೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರದೀಪ್ ಈಶ್ವರ್ ಅವರು ಗೆದ್ದ ನಂತರ, ಡಾ. ಕೆ. ಸುಧಾಕರ್ ಅವರಿಗೆ ಸವಾಲು ಎಸೆದಿದ್ದರು. ಹೀಗಿದ್ದಾಗ ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ. ಕೆ. ಸುಧಾಕರ್ ಸ್ಪರ್ಧೆ ಮಾಡಲು ಬಿಜೆಪಿ ಟಿಕೆಟ್ ಪಡೆದಾಗ, ಇದೇ ಪ್ರದೀಪ್ ಈಶ್ವರ್ ಸವಾಲು ಒಂದನ್ನ ಹಾಕಿದ್ರು. ಈಗ ಅದೇ ಸವಾಲು ಪ್ರದೀಪ್ ಈಶ್ವರ್ಗೆ ಕಂಟಕ ತಂದಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಒಂದೇ ಒಂದು ಮತ ಹೆಚ್ಚಾಗಿ ಪಡೆದರೂ, ಆ ಕ್ಷಣ ನಾನು ರಾಜೀನಾಮೆ ನೀಡುತ್ತೇನೆ ಎಂದು ಈ ಹಿಂದೆ ಮಾಧ್ಯಮಗಳ ಮುಂದೆ ಪ್ರದೀಪ್ ಈಶ್ವರ್ ಮಾತನಾಡುವಾಗ ಎಂದಿದ್ದರು . ಹೀಗಿದ್ದಾಗ ಡಾ. ಕೆ. ಸುಧಾಕರ್ ಅವರು ಇಂದು ಬರೋಬ್ಬರಿ 1,12,866 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ನಂತರ ಇದೀಗ ಪ್ರದೀಪ್ ಈಶ್ವರ್ ಅವರ ರಾಜೀನಾಮೆಗೆ ಒತ್ತಾಯ ಕೇಳಿಬಂದಿದೆ.
ಇದೀಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರದೀಪ್ ಈಶ್ವರ್ ಸವಾಲೆಸೆಯುವ ವಿಡಿಯೋವನ್ನು ಹಂಚಿಕೊಂಡು, ಬ್ರೇಕಿಂಗ್ ನ್ಯೂಸ್, ಇನ್ನು ಕೆಲವೇ ಗಂಟೆಗಳಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ಎಂದು ಬರೆದುಕೊಂಡಿದ್ದಾರೆ.ಸದ್ಯ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್ ಈಶ್ವರ್ ರಾಜೀನಾಮೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ