


ಕಾಸರಗೋಡು : ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೆರೆಮನೆಯ ಬಾವಿಯಲ್ಲಿ ಪತ್ತೆಯಾದ ಘಟನೆ ಪೆರ್ಲ ಅಡ್ಕ ಅಬ್ರಾಜೆಯಲ್ಲಿ ನಡೆದಿದೆ
ಮೃತ ಯುವಕನನ್ನು ಯತೀಶ (36) ಎಂದು ಗುರುತಿಸಲಾಗಿದೆ.
ಯತೀಶರ ತಂದೆ ಸೋಮವಾರ ಮುಂಜಾನೆ ನಿಧನರಾಗಿದ್ದು, ಬಳಿಕ ಯತೀಶ ನಾಪತ್ತೆಯಾಗಿದ್ದರು. ತಾಯಿ ಕೂಡ ಈ ಹಿಂದೆ ನಿಧನರಾಗಿದ್ದು, ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದ ತಂದೆಯ ಆರೈಕೆಯನ್ನು ಯತೀಶ ಮಾಡುತ್ತಿದ್ದರು ಎನ್ನಲಾಗಿದೆ.
ಸೋಮವಾರ ಮುಂಜಾನೆ ಸುಮಾರು 3.30ಕ್ಕೆ ಯತೀಶ ತಂದೆ ನಿಧನರಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಯತೀಶ ನಾಪತ್ತೆಯಾಗಿದ್ದರು. ತಂದೆಯ ಮೃತದೇಹದ ಅಂತ್ಯಕ್ರಿಯೆ ನಡೆಸುವಾಗಲೂ ಯತೀಶ ಸ್ಥಳದಲ್ಲಿರಲಿಲ್ಲ. ಯತೀಶರ ಮೊಬೈಲ್ ಫೋನ್, ಚಪ್ಪಲಿ ಮನೆಯಲ್ಲಿ ಪತ್ತೆಯಾಗಿತ್ತು.ಬಳಿಕ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಲಾಗಿತ್ತು. ಮಂಗಳವಾರ ಸಂಜೆ ಹುಡುಕಾಡಿದಾಗ ಯತೀಶರ ಮೃತದೇಹ ಮನೆ ಸಮೀಪದ ಜನವಾಸವಿಲ್ಲದ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಮೃತದೇಹವನ್ನು ಮೇಲೆತ್ತಿದರು. ಬದಿಯಡ್ಕ ಠಾಣಾ ಪೊಲೀಸರು ಮಹಜರು ನಡೆಸಿದರು.ತಂದೆಯ ನಿಧನದ ಶೋಕದಿಂದ ಯತೀಶ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ.