ನವದೆಹಲಿ(ಅ.29): ಇನ್ಮುಂದೆ ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ತುಂಬಿಸುವುದು ಕಡ್ಡಾಯಗೊಳಿಸಿ ಇಂದು(ಅ.29) ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.
ಸೆಣಬಿನ ಚೀಲಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಶೇ.100 ರಷ್ಟು ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ಮತ್ತು ಶೇ.20 ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಬೇಕಾಗಿದೆ. ಸೆಣಬಿನ ಚೀಲಗಳ ಬೆಲೆಯನ್ನು ಸಮಿತಿ ನಿರ್ಧರಿಸಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಎಥೆನಾಲ್ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದು, 2021ರಲ್ಲಿ ಹೊಸ ದರ ಜಾರಿಗೆ ಬರಲಿದೆ. ಪ್ರತಿ ಲೀಟರ್ ಎಥೆನಾಲ್ ಬೆಲೆ 62.65 ರೂಪಾಯಿಯಾಗಲಿದೆ ಎಂದು ಜಾವಡೇಕರ್ ಹೇಳಿದರು.
ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಸಾಕಷ್ಟು ಹಳೆಯದಾದ ಅಣೆಕಟ್ಟುಗಳ ಸ್ಥಿತಿಯನ್ನು ಸುಧಾರಿಸಲಾಗುವುದು. ಈ ಯೋಜನೆಯಲ್ಲಿ ಕರ್ನಾಟಕ ಸೇರಿ 19 ರಾಜ್ಯಗಳನ್ನು ಸೇರಿಸಲಾಗಿದೆ. ಆರಂಭದಲ್ಲಿ ಒಟ್ಟು 736 ಅಣೆಕಟ್ಟುಗಳನ್ನು ಯೋಜನೆಗೆ ಸೇರಿಸಲಾಗಿದೆ ಎಂದು ಜಾವಡೇಕರ್ ಮಾಹಿತಿ ನೀಡಿದರು.