



ಕಾರ್ಕಳ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡಬಿದ್ರೆ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ದರೋಡೆಕೋರರನ್ನು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 15 ರಂದು ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದ ಬಳಿ 70 ವರ್ಷದ ವೃದ್ದೆ ನಿರ್ಮಾಲ ಪಂಡಿತ್ ಎಂಬವರ ಕುತ್ತಿಗೆಯಿಂದ ಸುಮಾರು 24 ಗ್ರಾಂ ಮೌಲ್ಯದ ಚಿನ್ನದ ಸರ ಹಾಗೂ ಸೆಪ್ಟೆಂಬರ್ 02 ರಂದು ಮೂಡು ಮಾರ್ನಾಡು ಗ್ರಾಮದ ಬಸದಿ ಬಳಿ 82 ವರ್ಷದ ವೃದ್ದೆ ಪ್ರೇಮಾ ಎಂಬವರ ಕುತ್ತಿಗೆಯಿಂದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಸ್ಕೂಟರ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಸಿದು ಪರಾರಿಯಾಗಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಉಳ್ಳಾಲ ಪೆರ್ಮನ್ನೂರು ಚೆಂಬುಗುಡ್ಡೆಯ ಹಬೀಬ್ ಹಸನ್, ಯಾನೆ ಹಬ್ಬಿ ಯಾನೆ ಚೆಂಬುಗುಡ್ಡೆ ಹಬ್ಬಿ (42) ಹಾಗೂ ಬಂಟ್ವಾಳ ಜೋಡು ಮಾರ್ಗದ ಪರ್ಲಿಯಾ ಕ್ರಾಸ್ ರೋಡಿನ ಉಮ್ಮರ ಸಿಯಾಫ್ @ ಚಿಯಾ (29) ಅವನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಚಿನ್ನಾಭರಣಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಿಂದ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 2,50,000/- ಆಗಿರುತ್ತದೆ. ಹಬ್ಬಿ ಮೇಲೆ ಅಂತರ್ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಹಲವಾರು ದರೋಡೆ, ಕಳ್ಳತನ, ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ.ಈತನ ವಿರುದ್ದ ಸುಮಾರು 42 ಪ್ರಕರಣಗಳು ದಾಖಲಾಗಿರುತ್ತದೆ.
ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ, 2 ದಸ್ತಗಿರಿ ವಾರೆಂಟ್, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಉಳ್ಳಾಲ ಪೊಲೀಸ್ ಠಾಣೆಯಲ್ಲಿ 5 ದಸ್ತಗಿರಿ ವಾರೆಂಟ್, ಮುಲ್ಕಿ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್, ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್, ಬಟ್ಟೆ ಪೊಲೀಸ್ ಠಾಣೆಯಲ್ಲಿ 1 ದಸ್ತಗಿರಿ ವಾರೆಂಟ್ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ದಸ್ತಗಿರಿ ವಾರೆಂಟ್ ಗಳಿದ್ದು, ಒಟ್ಟು 15 ದಸ್ತಗಿರಿ ವಾರೆಂಟ್ ಮಾನ್ಯ ನ್ಯಾಯಾಲಯವು ಹೊರಡಿಸಿರುತ್ತಾರೆ. ಮತ್ತು ಚಿಯಾ ಈ ಹಿಂದೆ ಕೊಲೆ ಪ್ರಕರಣ ಒಂದರಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಪ್ರಕರಣಗಳ ಕೃತ್ಯಕ್ಕೆ ಬಳಸಿದ TVS Jupiter ಸ್ಕೂಟರ್ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳವು ಆಗಿರುವ ಸ್ಕೂಟರ್ ಆಗಿರುತ್ತದೆ .