ಮಂಗಳೂರು(ನ.2): ವ್ಯವಸ್ಥಿತವಾಗಿ ಶಿಸ್ತುಬದ್ಧ ರೀತಿಯಲ್ಲಿ ಕಾರ್ಯನಿರ್ವಹಿಸಿ ದಸರಾ ಮಹೋತ್ಸವ ಯಶಸ್ವಿಗೆ ಸಹಕರಿಸಿದ ಸ್ವಯಂ ಸೇವಕರ ಬಗ್ಗೆ ಮೆಚ್ಚುಗೆ ನವರಾತ್ರಿ ನಂತರ ಕ್ಷೀಣಿಸಿದ ಕೊರೊನಾ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕರೊನಾ ಪರಿಸ್ಥಿತಿ ಮಧ್ಯೆ ಕಠಿಣ ನಿಯಮಗಳಿಂದಾಗಿ ಉತ್ಸವ, ಹಬ್ಬಗಳನ್ನು ನಡೆಸುವುದೇ ಸವಾಲು. ಆದರೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 10 ದಿವಸ ನಡೆದ ನವರಾತ್ರಿ ಉತ್ಸವ ಅಚ್ಚುಕಟ್ಟಾಗಿತ್ತು. ಸ್ವಯಂಸೇವಕರು ಶಿಸ್ತುಬದ್ಧವಾಗಿ ಜನರಿಗೆ ದೇವರ ದರುಶನ ಮತ್ತು ಅನ್ನ ಸಂತರ್ಪಣೆ, ಪಾರ್ಕಿಂಗ್ ಮುಂತಾದ ವ್ಯವಸ್ಥೆಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಇಡೀ ಕಾರ್ಯಕ್ರಮವೇ ಮಾದರಿಯಾಗಿಸಲು ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶ್ಲಾಘಿಸಿದರು.
ಕುಟುಂಬ ಸಮೇತರಾಗಿ ಭಾನುವಾರ ಕುದ್ರೋಳಿ ಕ್ಷೇತ್ರದ ದರುಶನ ಪಡೆದ ನಂತರ ಕ್ಷೇತ್ರದ ಪುಷ್ಕರಣಿಯಲ್ಲಿ ನಡೆಯುತ್ತಿದ್ದ ಶುಚಿತ್ವ ಕಾರ್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್, ಟ್ರಸ್ಟೀ ಶೇಖರ ಪೂಜಾರಿ ಹಾಗೂ ಕ್ಷೇತ್ರದ ಸೇವಾದಳದ ಸದಸ್ಯರು ಉಪಸ್ಥಿತರಿದ್ದರು.
ದ.ಕ ಜಿಲ್ಲೆಯಲ್ಲಿ ನಾಗಾಲೋಟದಲ್ಲಿದ್ದ ಕರೊನಾ ಪಾಸಿಟಿವ್ ಪ್ರಕರಣ 10 ದಿನಗಳ ನವರಾತ್ರಿ ಉತ್ಸವ ಬಳಿಕ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕೊರೊನಾ ಪಾಸಿಟಿವ್ ಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಶ್ರೀ ಕ್ಷೇತ್ರದಲ್ಲಿರುವ ಪರಂಬ್ರಹ್ಮ ಸ್ವರೂಪಿ ಮಹಾನ್ ಶಕ್ತಿಯ ಮಹಿಮೆಯಾಗಿದ್ದು ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿರ್ನಾಮವಾಗಲಿ ಎಂದು ಪ್ರಾರ್ಥಿಸಲಾಯಿತು.