ದೈಹಿಕ ಸದೃಢತೆಯ ಕುರಿತು ನಡೆದ ಕಾರ್ಯಾಗಾರದಲ್ಲಿ ವಿದ್ಯಾಮಾತಾ ಅಕಾಡೆಮಿಯ ನೂರಾರು ವಿದ್ಯಾರ್ಥಿಗಳು ಭಾಗಿ





.ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಸಹಯೋಗದಲ್ಲಿ ಆರೋಗ್ಯ ಸಂಕಲ್ಪ ಕಾರ್ಯಕ್ರಮವು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ್ವಾರಕಾ ಕನ್ಸ್ಟ್ರಕ್ಷನ್ ಇದರ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ರವರು ಭವಿಷ್ಯದ ಯೋಧರಿಗೆ ಭದ್ರ ಬುನಾದಿ ಹಾಕುತ್ತಿರುವ ವಿದ್ಯಾಮಾತಾ ಅಕಾಡೆಮಿಗೆ ಸದಾ ನಾವು ಬೆನ್ನೆಲುಬಾಗಿ ನಿಂತು ಗ್ರಾಮೀಣ ಪ್ರದೇಶದ ಯುವ ಜನತೆ ದೇಶ ಸೇವೆಗೆ ಸೇರುವ ಕನಸನ್ನು ನನಸಾಗಿಸಲು ಬದ್ದರಾಗಿದ್ದೇವೆ ಎಂದು ವಿದ್ಯಾಮಾತಾ ಅಕಾಡೆಮಿಯ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾದ ರೋಟರಿ ಕ್ಲಬ್ ಯುವ -ಪುತ್ತೂರು ದರ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯರವರು ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವುದರ ಮೂಲಕ ತನ್ನದೇ ಆದ ಮೈಲುಗಲ್ಲನ್ನು ಸ್ಥಾಪಿಸಿರುವ ವಿದ್ಯಾಮಾತಾ ಅಕಾಡೆಮಿಯು ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಕೂಡ ತರಬೇತಿ ನೀಡಿ ಯಶಸ್ವಿಯಾಗಿರುವುದು ಶ್ಲಾಘನೀಯ ಹಾಗೂ ಅಕಾಡೆಮಿಯ ಈ ಕಾರ್ಯಗಳಿಗೆ ನಾವೆಲ್ಲರೂ ಜೊತೆಯಾಗಿ ನಿಲ್ಲುವ ಕಾರ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಗೆ ಬೆಂಬಲವಾಗಿ ನಿಂತಿರುವ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಕೋಶಾಧಿಕಾರಿ ವತ್ಸಲಾ ಪದ್ಮನಾಭರವರು ಮಾತನಾಡಿ ಸಂಸ್ಥೆಯ ಪ್ರತೀ ಕಾರ್ಯಗಳಿಗೂ ತಮ್ಮ ಬೆಂಬಲ ಘೋಷಿಸಿ ಶುಭಹಾರೈಸಿದರು.
ಮುಳಿಯ ಫಿಟ್ ನೆಸ್ ಮತ್ತು ವೆಲ್ ನೆಸ್ ಸೆಂಟರ್ ಇದರ ತರಬೇತುದಾರ ಸುನಿಲ್ ರಾಮಕೃಷ್ಣರವರು ಭವಿಷ್ಯದ ಸೇನಾನಿಗಳಿಗೆ ತಮ್ಮ ದೈಹಿಕ ಸದೃಢತೆಯ ಜೊತೆಗೆ ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ಸವಿಸ್ತಾರವಾಗಿ ತರಬೇತಿ ನೀಡಿ ಸಶಸ್ತ್ರ ಪಡೆಗಳ ನೇಮಕಾತಿಯ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೊಸ ಹುರುಪನ್ನು ತಂದರು.
ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕ ನೆಲೆಯಲ್ಲಿ ಮಾತನಾಡಿದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ದೈಹಿಕ ಸದೃಢತಾ ಪರೀಕ್ಷೆಯ ಮಹತ್ವ ಹಾಗೆಯೇ ಸಂಸ್ಥೆಯ ಸಾಧನೆಯ ಕುರಿತು ಬೆಳಕು ಚೆಲ್ಲಿದರು.
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾಮಾತಾ ಅಕಾಡೆಮಿಯ ದೈಹಿಕ ಸದೃಢತೆಯ ತರಬೇತುದಾರ ವಿಜೇತ್ ಕುಮಾರ್, ತರಬೇತುದಾರ ಚಂದ್ರಕಾಂತ್, ಚೇತನಾ ಸತೀಶ್ ಹಾಗೂ ಸಿಬ್ಬಂದಿ ಮಿಥುನ್ ರೈ ರವರು ಹಾಗೂ ಸಶಸ್ತ್ರ ಪಡೆಗಳ ನೇಮಕಾತಿಯ ತರಬೇತಿಯಲ್ಲಿರುವ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.