


ಮುಂಬೈ: ಬೀಡ್ ಜಿಲ್ಲೆಯಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ತಮ್ಮ ಆಪ್ತ ಹಿಂಬಾಲಕ ವಾಲ್ಮೀಕ್ ಕರಡ್ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಧನಂಜಯ್ ಮುಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಸ್ಸಜೋಗ್ ಗ್ರಾಮದ ಸರಪಂಚ ಸಂತೋಷ್ ದೇಶ್ ಮುಖ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮ್ಮ ಆಪ್ತ ಹಿಂಬಾಲಕ ವಾಲ್ಮೀಕ್ ಕರಡ್ ನನ್ನು ಪೊಲೀಸರು ಬಂಧಿಸಿದ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೂಚನೆಯ ಮೇರೆಗೆ ಧನಂಜಯ್ ಮುಂಡೆ ರಾಜೀನಾಮೆ ಸಲ್ಲಿಸಿದ್ದಾರೆ.
49 ವರ್ಷದ ಧನಂಜಯ್ ಮುಂಡೆ ಎನ್ಸಿಪಿ (ಅಜಿತ್ ಪವಾರ್ ಬಣ) ಶಾಸಕರಾಗಿದ್ದು, ಬೀಡ್ ಜಿಲ್ಲೆಯ ಪಾರ್ಲಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, ಬಿಜೆಪಿಯ ಹಿರಿಯ ನಾಯಕ ದಿವಂಗತ ಗೋಪಿನಾಥ್ ಮುಂಡೆ ಅವರ ಸೋದರಳಿಯ ಹಾಗೂ ಮಹಾರಾಷ್ಟ್ರ ಸಚಿವೆ ಪಂಕಜ್ ಮುಂಡೆ ಅವರ ಸೋದರ ಸಂಬಂಧಿಯೂ ಆಗಿದ್ದಾರೆ. 2013ರಲ್ಲಿ ಧನಂಜಯ್ ಮುಂಡೆ ಎನ್ಸಿಪಿಗೆ ಸೇರ್ಪಡೆಯಾಗಿದ್ದರು. 2023ರಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ವಿಭಜನೆಗೊಂಡ ನಂತರ, ಅಜಿತ್ ಪವಾರ್ ಬಣದೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿಂದೆ ಅವರು ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಉದ್ಧವ್ ಠಾಕ್ರೆ ಸರಕಾರದಲ್ಲಿ ರಾಜ್ಯ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಧನಂಜಯ್ ಮುಂಡೆಯ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅದನ್ನು ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.