

ವಿಟ್ಲ: ಬಂಟ್ವಾಳ ತಾಲೂಕು ಕೇಪು ಗ್ರಾಮದ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಇದೀಗ ಭರಣಿ ಮಹೋತ್ಸವವು ಹಲವು ಅಪೂವ೯ ಆಶ್ಚರ್ಯಗಳೊಂದಿಗೆ ಮುನ್ನಡೆಯುತ್ತಿದೆ. ಇದೇ ಮಾರ್ಚ್ 20ರಂದು ಆರಂಭವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿದ್ದು ದಿನಾಂಕ 27 ರಂದು ಸಂಪನ್ನಗೊಳ್ಳಲಿದೆ.
ದಿನಾಂಕ 25-3-2025 ರಂದು ನಡೆದ ಉತ್ಸವದಲ್ಲಿ ಎಳೆಯ ಮಕ್ಕಳನ್ನು ಶೃಂಗರಿಸಿ ಭಗವತೀ ದೇವತೆಯ ಸಂಕಲ್ಪದಲ್ಲಿ ಕಂಚಿಲ್ ಸೇವೆ ನಡೆಸಿರುವುದು ವಿಶೇಷ ನಡವಳಿಯಾಗಿರುತ್ತದೆ. ಕರಾವಳಿ ಜಿಲ್ಲೆಗಳ ಆಯ್ದ ಭಗವತೀ ಕ್ಷೇತ್ರಗಳಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ ಈ ಸಂಕಲ್ಪವು ಅನುಕರಣೀಯವಾದುದು ಎಂದು ಸಮಾಜ ಚಿಂತಕರ ಅಭಿಪ್ರಾಯವಾಗಿರುತ್ತದೆ.
ಭರಣಿ ನಕ್ಷತ್ರದ ಒಂದು ಮಗುವನ್ನು ಆಯ್ಕೆ ಮಾಡಿ “ಮುಹೂರ್ತ ಮಗು” ವಾಗಿ ಸ್ವೀಕರಿಸಿದ್ದು ಭಗವತೀ ಸಂಕಲ್ಪದಲ್ಲಿ ನೇಮ ನಿಷ್ಟೆಗೆ ಒಳಪಡಿಸಿ ದೇವಸ್ಥಾನ ಪಕ್ಕದಲ್ಲಿ ಹೆತ್ತವರೊಂದಿಗೆ ಉಳಿಸಿಕೊಂಡಿರುವರು. ದೇವಾಲಯದ ಆರಾಧನೆಯೊಂದಿಗೆ ಭಗವತೀ ಎಂಬ ಗೌರವದಿಂದ ನೋಡಿಕೊಳ್ಳುತ್ತಿರುವರು ಎಂದು ಈ ವಿಚಾರವಾಗಿ ಕಣ್ಣ ಕಲೆಕಾರ ಹಾಗೂ ಪುರುಶೋತ್ತಮ ಗುರಿಕಾರರು ಮಾಹಿತಿಗಳನ್ನು ನೀಡಿದರು.
ಸಮಾಜದ ದುಸ್ಥಿತಿಗಳ ನಿವಾರಣೆಗೆ “ಮಕ್ಕಳೇ ದೇವರು” ಹಾಗೂ “ತಾಯಿಯೇ ಮೊದಲ ಗುರು”ಎಂಬ ಸಂಕಲ್ಪದ ಆರಾಧನೆಯ ಕಾರ್ಯಗಳು ಹಾಗೂ ಪ್ರಸಾದ ವಿತರಣೆಗಳು ಸಾರ್ವತ್ರಿಕ ಆಚರಣೆಯಾಗುವ ಅಗತ್ಯವಿದೆ. ಜಾತಿನೀತಿಯನ್ನು ಬದಿಗಿಟ್ಟು ಪರಿಷ್ಕೃತ ಹೆಜ್ಜೆಗಳು ಮುಂದಿನ ದಿನಗಳಲ್ಲಿ ಅಗತ್ಯವಿದೆ. ಇದು ಭಾರತೀಯ ಸಮಾಜ ಜೀವನ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆಯ ಸಮಾಜ ಚಿಂತಕರಾದ ಅಡ್ವಳರ ಕರೆಯಾಗಿರುತ್ತದೆ.
ಕೃಷ್ಣ ಎನ್. ಉಚ್ಚಿಲ್ ಇವರ ಮಹಾದಾನದಿಂದ ಮೊದಲ್ಗೊಂಡು ಭಕ್ತಾದಿ ಮಹನೀಯರ ಸೇವೆ ಹಾಗೂ ತ್ಯಾಗದ ದ್ಯೋತಕವಾಗಿ ಶ್ರೀ ಕ್ಷೇತ್ರವು ಮಹಾ ಕಾರಣೀಕದ ಸನ್ನಿಧಿಯಾಗಿ ಮೂಡಿ ಬಂದಿದೆ. ಸುಮಾರು 600 ವರ್ಷಗಳ ಹಿಂದೆಯೆ ಸಂಪೂರ್ಣ ತೆರೆಮರೆಗೆ ತಳ್ಳಲ್ಪಟ್ಟ ಶ್ರೀ ಕ್ಷೇತ್ರವು ಇದೀಗ ಪುನಶ್ಚೇತನಗೊಂಡು ಭಜಕರ ಇಷ್ಟಾರ್ಥ ಸಿದ್ಧಿಯ ಪವಿತ್ರ ತಾಣವಾಗಿ ಬೆಳೆಯುತ್ತಿರುವುದು ಶುಭ ಲಕ್ಷಣವಾಗಿರುತ್ತದೆ.