

ಉಡುಪಿ: ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಮಹೇಶ್ಚಂದ್ರ ಕೆ ಅವರನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ ಅವರು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಹೇಶ್ಚಂದ್ರ ಅವರ ಅಮಾನತಿಗೆ ಹಲವು ಕಾರಣಗಳನ್ನು ನೀಡಲಾಗಿದೆ. ಕರ್ತವ್ಯ ಲೋಪ, ಕೆಲಸದಲ್ಲಿ ವಿಳಂಬ, ಮೇಲಾಧಿಕಾರಿಗಳು ನೀಡಿದ ಆದೇಶಗಳನ್ನು ಪಾಲಿಸದಿರುವುದು, ಹಲವು ವಿಷಯದಲ್ಲಿ ಜಿಲ್ಲಾಡಳಿತಕ್ಕೆ ಮುಜುಗರದ ಸನ್ನಿವೇಶ ಉಂಟಾಗುವಂತೆ ಮಾಡಿರುವುದು, ಜಿಲ್ಲೆಯಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಜಮೀನಿನ ಪರಿಹಾರ ಮೊತ್ತವನ್ನು ಭೂಮಾಲಿಕರಿಗೆ ಪಾವತಿಸಲು ಹಾಗೂ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಬಾಕಿ ಉಳಿಸಿರುವುದು ಅವರ ಅಮಾನತಿಗೆ ಕಾರಣಗಳಲ್ಲಿ ಸೇರಿವೆ.
ಕಚೇರಿಗೆ ಆಗಮಿಸುವ ಸಾರ್ವಜನಿಕರನ್ನು ಭೇಟಿಯಾಗದೇ, ಅವರಿಗೆ ಸರಿಯಾಗಿ ಸ್ಪಂದಿಸದೇ, ಕಚೇರಿಯ ಸಿಬ್ಬಂದಿಗಳನ್ನು ಭೇಟಿಯಾಗುವಂತೆ ಸೂಚಿಸುವುದು, ಸರಕಾರಿ ಕೆಲಸಗಳಲ್ಲಿ ನಿರ್ಲಕ್ಷ್ಯತನದ ಧೋರಣೆ, ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದೇ ಕರ್ತವ್ಯ ಲೋಪ ಎಸಗುತ್ತಿರುವುದು, ಸರಕಾರದ ಧೋರಣೆಗಳಿಗೆ ವಿರುದ್ಧವಾಗಿ ಕಾರ್ಯಪೆಸಗು ತ್ತಿರುವುದು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಕಾರ್ಯಗಳನ್ನು ಮಾಡುತ್ತಿರುವುದು ಅಮಾನತಿಗೆ ಕಾರಣವೆಂದು ಹೇಳಲಾಗಿದೆ.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗಡೆ ಅವರಿಗೆ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತರ ಹೆಚ್ಚುವರಿ ಪ್ರಭಾರವನ್ನು ನೀಡಲಾಗಿದೆ.








