ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ (85) ವಿಧಿವಶರಾಗಿದ್ದಾರೆ. ನಗರದ ಅಂಬಲಪಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಗೋವಿಂದಾಚಾರ್ಯರು ಕೊನೆಯುಸಿರೆಳೆದಿದ್ದಾರೆ. ಗೋವಿಂದಾಚಾರ್ಯರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಗೋವಿಂದಾಚಾರ್ಯ ಪ್ರವಚನಕಾರ ಹಾಗೂ ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಜೊತೆಗೆ, ಪತ್ರಕರ್ತರಾಗಿ ಅನೇಕ ಅಂಕಣಗಳನ್ನು ಸಹ ಬರೆದಿದ್ದರು. ಬನ್ನಂಜೆ ಗೋವಿಂದಾಚಾರ್ಯರು ನಟ ಡಾ.ವಿಷ್ಣುವರ್ಧನ್ರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು.
ಗೋವಿಂದಾಚಾರ್ಯರು ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದರು. ಕೇವಲ ಸಾಹಿತ್ಯ ಲೋಕಕ್ಕೆ ಸೀಮಿತವಾಗದೆ ಮೂರು ಚಲನಚಿತ್ರಗಳಿಗೆ ಸಂಭಾಷಣೆ ಸಹ ಬರೆದಿದ್ದರು. ಮಧ್ವಾಚಾರ್ಯ, ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಗೋವಿಂದಾಚಾರ್ಯರು ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಸಹ ಬರೆದಿದ್ದರು.