


ಕಾಮರೆಡ್ಡಿ: ಮೂವರು ಬಾಲಕಿಯರು ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ(ಮಾ.8) ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ತಂದೆಯೇ ಅವರನ್ನು ನೀರಿಗೆ ತಳ್ಳಿರಬಹುದು ಎಂದು ಅನುಮಾನಿಸಲಾಗಿದ್ದು, ಬಾಲಕಿಯರು ಬೆಳಗ್ಗೆ ಆತನೊಂದಿಗೆ ಹೊರಗೆ ಹೋಗಿದ್ದರು ಮತ್ತು ಮನೆಗೆ ಹಿಂತಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಫಾತ್(8), ಆಯತ್ (7) ಮತ್ತು ಮರಿಯಮ್(5) ಎಂಬ ಮೂವರು ಸಾವನ್ನಪ್ಪಿರುವ ಸಹೋದರಿಯರು. ಮಕ್ಕಳ ತಂದೆ ಇಸ್ಮಾಯಿಲ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಮಕ್ಕಳ ತಾಯಿ ಶಬೀನಾ ಕೆಲಸಕ್ಕೆ ಹೋಗಿದ್ದಾಗ, ಇಸ್ಮಾಯಿಲ್ ಮಕ್ಕಳನ್ನು ತಿಂಡಿ ಕೊಡಿಸುವುದಾಗಿ ಆಟೋದಲ್ಲಿ ಕರೆದುಕೊಂಡು ಹೋಗಿದ್ದ. ಶಬೀನಾ ಮನೆಗೆ ಬಂದಾಗ ಮಕ್ಕಳು ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಸ್ಮಾಯಿಲ್ ಮಕ್ಕಳೊಂದಿಗೆ ಹೋಗಿರುವುದು ಕಂಡುಬಂದಿದೆ.
ಸುಮಾರು 5 ಲಕ್ಷ ರೂಪಾಯಿ ಸಾಲದ ಹೊರೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳನ್ನು ಸಾಕಲು ಸಾಧ್ಯವಿಲ್ಲ ಎಂಬ ಭಯದಿಂದ ತಂದೆಯೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಿವಾಸಿಗಳು ನೀರಿನ ಟ್ಯಾಂಕ್ ಬಳಿ ಜಮಾಯಿಸಿ ಮೂವರು ಸಹೋದರಿಯರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.








