


ಕಲಬುರಗಿ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ಕೆಎಸ್ಆರ್ಪಿ ಪೊಲೀಸ್ ಸಿಬ್ಬಂದಿಯೊಬ್ಬ ವಿದ್ಯಾರ್ಥಿನಿಯನ್ನು ಪ್ರೇಮದ ಬಲೆಗೆ ಬೀಳಿಸಿ ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯಾಗದೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ನಗರದ ಮಹಾಲಕ್ಷ್ಮೀ ಲೇಔಟ್ ನಿವಾಸಿ ವಿದ್ಯಾರ್ಥಿನಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಕೆಎಸ್ಆರ್ಪಿ ಪೊಲೀಸ್ ಸಿಬ್ಬಂದಿ ಶಿವಾನಂದ ಅವಲಕ್ಕಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

2024ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಇಬ್ಬರಿಗೆ ಪರಿಚಯವಾಗಿದ್ದು, 2025ರವರೆಗೆ ನಿರಂತರವಾಗಿ ಫೋನ್ ಮೂಲಕ ಮಾತನಾಡಿ ಪ್ರೀತಿಯ ಸಂಬಂಧ ಬೆಳೆಸಿಕೊಂಡಿದ್ದಾನೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ ಕಲಬುರಗಿ, ವಿಜಯಪುರ, ಹಾಸನ ಸೇರಿದಂತೆ ವಿವಿಧ ಸ್ಥಳಗಳ ಲಾಡ್ಜ್ಗಳಲ್ಲಿ ನಾಲ್ಕು-ಐದು ಬಾರಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎನ್ನಲಾಗಿದೆ.
ಆದರೆ 2025ರ ನ.19ರಂದು ವಿದ್ಯಾರ್ಥಿನಿ ಕರೆ ಮಾಡಿದಾಗ ಮದುವೆಯಾಗುವುದಿಲ್ಲ. ಇನ್ನು ಮುಂದೆ ಕರೆ ಮಾಡಬೇಡ ಎಂದು ಹೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆದಿಂದ ದಿಗ್ಧಮೆಗೊಂಡ ಸಂತ್ರಸ್ತೆ ಬಳಿಕ ಆರೋಪಿಯ ಮನೆಗೆ ತೆರಳಿದ್ದಾಳೆ. ಅಲ್ಲಿ ಆರೋಪಿಯ ಕುಟುಂಬಸ್ಥರು ಅವಳನ್ನು ನಿಂದಿಸಿ ಕಳುಹಿಸಿದ್ದಾರೆಯೆಂದು ತಿಳಿದುಬಂದಿದೆ.
ಇದಲ್ಲದೆ “ನಾನು ಪೊಲೀಸ್, ಸುಮ್ಮನಿರದಿದ್ದರೆ ನಿನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಕುರಿತು ಸಂತ್ರಸ್ತೆಯ ದೂರಿನ ಮೇರೆಗೆ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








