ಚಿಕ್ಕಮಗಳೂರು: ನಾವು ಬೇಕಾದ್ದನ್ನ ಮಾಡುತ್ತೇವೆ, ಭಯೋತ್ಪಾದನೆ ಮಾಡುತ್ತೇವೆ ಎಂದು ದುರ್ವರ್ತನೆ ತೋರಿದರೆ ಬರೀ ಬಾಲವಲ್ಲ, ಅಂತಹ ಮಾನಸೀಕತೆಯ ತಲೆಯನ್ನೂ ಕತ್ತರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಐಟಿ, ಇಡಿ ದಾಳಿ ಮಾಡಿದ್ದಕ್ಕೆ ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರ ಕಚೇರಿ ಮೇಲೆ ಮುತ್ತಿಗೆ ಹಾಕಿ ದಾಳಿ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಬಹುದು. ಬೇಕಾಗಿದ್ದೆಲ್ಲಾ ಮಾಡುತ್ತೇವೆ ಅನ್ನೋದಕ್ಕೆ ಭಾರತಕ್ಕೊಂದು ಸಂವಿಧಾನ ಇದೆ. ಭಾರತಕ್ಕೊಂದು ಕಾನೂನಿದೆ. ಬೇಕಾಗಿದ್ದೆಲ್ಲಾ ಮಾಡಿ ಬದುಕೋದಕ್ಕೆ ಇದು ಪಾಕಿಸ್ತಾನ ಅಲ್ಲ. ಬೇಕಾಗಿದ್ದೆಲ್ಲಾ ಮಾಡಿ ಬದುಕುತ್ತೇವೆ ಅನ್ನೋರಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದರು.
ಈ ನೆಲದ ಕಾನೂನು, ಸಂವಿಧಾನವನ್ನು ಗೌರವಿಸಬೇಕು. ಅದಕ್ಕೆ ತಕ್ಕಂತೆ ಇದ್ದರೆ ಮಾತ್ರ ಈ ದೇಶದಲ್ಲಿ ಇರಲಿ. ಇಲ್ಲದಿದ್ದರೆ ಅವರಿಗೇ ಕೊಟ್ಟಿರುವ ಪಾಕಿಸ್ತಾನ ಇದೆ. ಅಲ್ಲಿಗೆ ಹೋಗಲಿ ಎಂದರು. 1947ರಲ್ಲಿ ಪಾಕಿಸ್ತಾನ ವಿಭಜನೆ ಮಾಡುವಾಗ ಇಂತಹ ಪಿಎಫ್ಐ ಮನಸ್ಥಿತಿಯವರು ನಮಗೆ ಬೇಕು ಎಂದು ಪಡೆದುಕೊಂಡಿದ್ದು. ಭಯೋತ್ಪಾದನೆ ಮಾಡುತ್ತೇವೆ, ಅರಾಜಕತೆ ಸೃಷ್ಠಿ ಮಾಡುತ್ತೇವೆ. ನಾವು ಹೇಗೆ ಬೇಕಾದ್ರು ಇರುತ್ತೇವೆ ಅನ್ನೋದಕ್ಕೆ ಈ ನೆಲದಲ್ಲಿ ಅವಕಾಶವಿಲ್ಲ. ಅಂತಹವರ ಬರೀ ಬಾಲವಲ್ಲ ಆ ಮಾನಸೀಕತೆಯ ತಲೆಯನ್ನೂ ಕಟ್ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.