




ಆನೇಕಲ್: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಜೈಲಿನ ನಿಯಮಗಳನ್ನು ಉಲ್ಲಂಘಿಸಿ ಪತ್ನಿಯೊಂದಿಗೆ ಮಾತನಾಡಲು ಜೈಲು ಸಿಬ್ಬಂದಿ ಸಹಾಯ ಪಡೆದಿರುವ ಆರೋಪದಡಿ ಆತನ ವಿರುದ್ಧ ದೂರು ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಿಗೆ ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡುವುದಕ್ಕೆ 3 ನಂಬರ್ಗಳನ್ನು ಕೊಡಲಾಗುತ್ತದೆ. ವಕೀಲರ ಜೊತೆ ಹಾಗೂ ಕುಟುಂಬದವರ ಜೊತೆ ಮಾತನಾಡಲು ಅವಕಾಶ ಕೊಡುವ ನಂಬರ್ ಅನ್ನು ರಿಜಿಸ್ಟರ್ ಮಾಡಿಸಿಕೊಂಡಿರುತ್ತಾರೆ. ಈ ನಂಬರ್ಗಳನ್ನ ನಮೂದು ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಮೌನೇಶ್.ಹೆಚ್.ಕೋರಿ ಎಂಬ ಸಿಬ್ಬಂದಿಗೆ ವಹಿಸಲಾಗಿತ್ತು.
ಆರೋಪಿ ಪ್ರದೋಷ್ ಬೇರೆ ಖೈದಿ ಹೆಸರಿನಲ್ಲಿ ನಂಬರ್ ಪಡೆದು, ಈ ನಂಬರ್ ನೋಂದಾಯಿಸಿಕೊಳ್ಳಲು ಜೈಲು ಸಿಬ್ಬಂದಿ ಮೌನೇಶ್ ಸಹಾಯ ಮಾಡಿದ್ದನು. ಅಲ್ಲದೇ ವಕೀಲರ ನಂಬರ್ ಎಂದು ನಮೂದಿಸಿ ಪತ್ನಿಯ ಜೊತೆ ಮಾತನಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೌನೇಶ್ ಹಾಗೂ ಪ್ರದೋಷ್ ವಿರುದ್ಧ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.








