ಮಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಯುವಕರ ಗುಂಪೊಂದನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಭಾವಿಸಿ ಪೊಲೀಸರಿಗೆ ಒಪ್ಪಿಸಿದ ಸ್ವಾರಸ್ಯಕರ ಘಟನೆ ದೇರಳಕಟ್ಟೆ ಬಳಿ ನಡೆದಿದೆ.
ಅನುಮಾನಾಸ್ಪದವಾಗಿ ಕಂಡು ಬಂದ ಯುವಕರ ತಂಡದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆ, ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ತಂಡವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಎರಡು ಕಾರುಗಳಲ್ಲಿ ಬಂದ ಯುವಕರ ತಂಡವು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯ ಪ್ರಚಾರ ನಡೆಸಲು ದೇರಳಕಟ್ಟೆ ಬಳಿ ತೆರಳಿತ್ತು. ಸಮೀಪದಲ್ಲೇ ಇದ್ದ ಟೀ ಅಂಗಡಿ ಮುಂದೆ ಮಕ್ಕಳಿಗೆ ಆ ಯುವಕರು ತಿಂಡಿಗಳನ್ನು ಹಂಚುತ್ತಿದ್ದರು, ಇದನ್ನು ಗಮನಿಸಿದ ಸ್ಥಳೀಯ ಜನರು ಇವರನ್ನು ಮಕ್ಕಳ ಕಳ್ಳರೆಂದು ಭಾವಿಸಿ ಪೊಲೀಸರಿಗೆ ದೂರು ನೀಡಿದ್ದರು.
ಯುವಕರ ತಂಡವು ಮಕ್ಕಳ ಕಳ್ಳರಾಗಿರದೆ, ಯುವ ಕಾಂಗ್ರೆಸ್ಸಿನ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು ಎಂಬುದು ವಿಚಾರಣೆಯ ಬಳಿಕ ತಿಳಿದು ಬಂದಿದೆ. ವಿಚಾರಣೆ ನಡೆಸಿದ ಬಳಿಕ ತಂಡವನ್ನು ಕಳುಹಿಸಿ ಕೊಡಲಾಗಿದೆ. ಕಾರಿನ ಹಿಂಬದಿಯಲ್ಲಿ ಮೊಹಮ್ಮದ್ ನಲಪ್ಪಾಡ್ ಭಾವಚಿತ್ರವಿರುವ ಪೋಸ್ಟರುಗಳು ಕಂಡು ಬಂದಿವೆ.