ತೆಲಂಗಾಣ: ತನ್ನ ಮಾಲೀಕನನ್ನೇ ಕೊಂದ ಹುಂಜವನ್ನು ಪೊಲೀಸರು ಕಸ್ಟಡಿಗೆ ಪಡೆದಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ. ತಂಗುಲ್ಲಾ ಸತೀಶ್ ಹುಂಜದ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿ.
ತೆಲಂಗಾಣದ ಜಗ್ಟೈಲ್ ಜಿಲ್ಲೆಯ ಎಲ್ಲಮ್ಮ ದೇವಾಲಯದ ಸಮೀಪ ಅಕ್ರಮವಾಗಿ ಹುಂಜಗಳ ಅಂಕ ನಡೆಸಲಾಗಿತ್ತು. ಅಂಕದಲ್ಲಿ ಸ್ಪರ್ಧಿಸಿದ್ದ ಹುಂಜ ಆಯಾಸಗೊಂಡಿತ್ತು. ಈ ವೇಳೆ ಸತೀಶ್ ಅದನ್ನು ಬಿಗಿಯಾಗಿ ಹಿಡಿದುಕೊಂಡಿದ್ದು, ಬಿಡಿಸಿಕೊಳ್ಳಲು ಹುಂಜ ಒದ್ದಾಡಿದೆ.
ಈ ವೇಳೆ ಆಕಸ್ಮಿಕವಾಗಿ ಹುಂಜದ ಕಾಲಿಗೆ ಕಟ್ಟಲಾಗಿದ್ದ ಕತ್ತಿ ತಾಕಿ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸದ್ಯ ಅಂಕದ ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಿ ಹುಂಜವನ್ನು ಹಗ್ಗದಿಂದ ಕಟ್ಟಲಾಗಿದ್ದು, ಅದಕ್ಕೆ ಬೇಕಾದ ಆಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ. ಪೊಲೀಸರು ಹುಂಜವನ್ನ ಅರೆಸ್ಟ್ ಮಾಡಿದ್ದಾರೆ, ವಶಕ್ಕೆ ಪಡೆದಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಆದ್ರೆ ಅದನ್ನ ಪೊಲೀಸರು ನಿರಾಕರಿಸಿದ್ದಾರೆ. ಹುಂಜವನ್ನು ಕೋರ್ಟ್ಗೆ ಹಾಜರುಪಡಿಸಲಿದ್ದು, ನ್ಯಾಯಾಧೀಶರು ಹೇಳಿದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.