ಮೈಸೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಪ್ರೇಮಿಗಳಿಬ್ಬರ ಮದುವೆ ಸಂಭ್ರಮ ಕಳೆಗಟ್ಟುತ್ತಿತ್ತು. ಆದರೆ ಇಲ್ಲೊಬ್ಬ ಕಿರಾತಕಿ ತನ್ನ ಮಗಳ ಮದುವೆಯನ್ನೇ ನಿಲ್ಲಿಸಲು ಭಾವಿ ಅಳಿಯನ ತಂದೆಯನ್ನೇ ಕೊಂದು ಜೈಲು ಸೇರಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಗೌಡರಹುಂಡಿ ಗ್ರಾಮದ ಶಿವರಾಜಪ್ಪ ಕೊಲೆಯಾದ ದುರ್ದೈವಿಯಾಗಿದ್ದಾರೆ. ಶರತ್ ಕುಮಾರ್, ಮಧು ಹಾಗೂ ಮಲ್ಲಿಗಮ್ಮ ಬಂಧಿತ ಆರೋಪಿಗಳು. ಮಲ್ಲಿಗಮ್ಮಳ ಮಗಳು ಮತ್ತು ಕೊಲೆಯಾದ ಶಿವರಾಜಪ್ಪನ ಮಗ ಪವನ್ ಕುಮಾರ್ ಪರಸ್ಪರ ಪ್ರೀತಿಸುತ್ತಿದ್ದು, ಮದುವೆ ನಿಶ್ಚಿತಾರ್ಥವೂ ನೆರವೇರಿತ್ತು.

ಆದರೆ ಈ ಮದುವೆ ಮಲ್ಲಿಗಮ್ಮನಿಗೆ ಇಷ್ಟವಿರಲಿಲ್ಲ. ಶರತ್ ಕುಮಾರ್ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಲ್ಲಿಗಮ್ಮ, ಈ ಮದುವೆಯನ್ನ ನಿಲ್ಲಿಸುವಂತೆ ಒತ್ತಡ ಹಾಕಿದ್ದು, ಪ್ರೇಯಸಿಯ ಮಾತು ಕೇಳಿದ ಶರತ್ಕುಮಾರ್, ಮಧು ಎಂಬಾತನ ಸಹಾಯ ಪಡೆದು ಮೇ 28ರಂದು ಶಿವರಾಜಪ್ಪನನ್ನು ಕೊಂದು ನಾಲೆಗೆ ಎಸೆದಿದ್ದರು. ಮೃತದೇಹ ಜೂ.2ರಂದು ರಾಮಪುರ ನಾಲೆಯಲ್ಲಿ ಪತ್ತೆಯಾಗಿತ್ತು.

ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪವನ್ ಕುಮಾರ್ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಮಲ್ಲಿಗಮ್ಮಳ ಪ್ರಿಯಕರ ಶರತ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ಮೂವರು ಆರೋಪಿಗಳನ್ನೂ ಪೊಲೀಸರು ಬುಧವಾರ ರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.











