ಬೆಂಗಳೂರು: ಹಣದಾಸೆಗೆ ಕೆಲಸದಾಕೆಯ 38 ದಿನಗಳ ಹಸುಗೂಸನ್ನು ಮಾರಾಟಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲಕಿ ಸೇರಿ ಮೂವರನ್ನು ವಿಲ್ಸನ್ ಗಾರ್ಡ್ನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆಡುಗೋಡಿ ನಿವಾಸಿ ತರುಣಮ್ ಬಾನು (38), ಆಕೆಯ ಸಂಬಂಧಿ ಹಾಗೂ ಮಗು ಮಾರಾಟಕ್ಕೆ ಸಹಕರಿಸಿದ್ದ ನಿಶಾತ್ ಕೌಶರ್ (45) ಹಾಗೂ ಅವರಿಂದ ಮಗು ಖರೀದಿಸಿದ್ದ ಸಂಬಂಧಿ ಎಚ್ ಬಿಆರ್ ಲೇಔಟ್ ನಿವಾಸಿ ಕೆ.ಸವೋದ್ (51) ಎನ್ನಲಾಗಿದೆ.
ಸಾಮಾಜಿಕ ಕಾರ್ಯಕರ್ತೆಯಾದ ತರುಣಮ್ ಬಾನು ಮನೆಯಲ್ಲಿ ಶಿರೀನ್ ಎಂಬಾಕೆ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಆಟೋ ಚಾಲಕ ಮುಬಾರಕ್ ಪಾಷಾ ಜತೆ ಅಕ್ರಮ ಸಂಬಂಧ ಹೊಂದಿ ಶಿರೀನ್ ಗರ್ಭಿಣಿಯಾಗಿದ್ದು, 38 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ತರುಣಮ್ ಬಾನು ಸಂಬಂಧಿ ನಿಶಾತ್ ಕೌಶರ್ ಳ ಮೈದುನ ಸವೋದ್ ದಂಪತಿಗೆ 15 ವರ್ಷಗಳಿಂದ ಮಕ್ಕಳಾಗಿರಲಿಲ್ಲ.
ಈ ಕಾರಣದಿಂದಾಗಿ ಬೇಸೆತ್ತಿದ್ದ ಸವೂದ್ ಮಗು ದತ್ತು ಪಡೆಯಲು ಮುಂದಾಗಿದ್ದರು. ಈ ವೇಳೆ ತರುಣಮ್ ಬಾನು, ತನ್ನ ಕೆಲಸದಾಕೆ ಶಿರೀನ್ಳ ವಿಚಾರ ತಿಳಿದುಕೊಂಡು ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಮುಬಾರಕ್ ಪಾಷಾಗೆ ಹಣದ ಆಮಿಷವೊಡ್ಡಿ ಮಗು ಮಾರಾಟಕ್ಕೆ ಪ್ರಚೋದನೆ ನೀಡಿದಲ್ಲದೆ, 1.30 ಲಕ್ಷ ರೂ.ಗೆ ಮಾರಾಟ ಮಾಡಿ, ಮುಂಗಡ 50 ಸಾವಿರ ರೂ. ಪಡೆದುಕೊಂಡಿದ್ದರು.
ಹೀಗಾಗಿ ಆರೋಪಿ ಮುಬಾರಕ್ ಪಾಷಾ, ಆ.11ರಂದು ಶಿರೀನ್ ಬಳಿ ಹೋಗಿ ಮಗುವನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವುದಾಗಿ ಕೊಂಡೊಯ್ದು ತರುಣಮ್ ಬಾನುಗೆ ಕೊಟ್ಟಿದ್ದಾನೆ. ಆಕೆ ಸವೋದ್ಗೆ ಮಗು ಮಾರಾಟ ಮಾಡಿ ಹಣ ಪಡೆದುಕೊಂಡಿದ್ದರು.
ಮತ್ತೂಂದೆಡೆ ಮುಬಾರಕ್ ಪಾಷಾ ಮತ್ತು ಮನೆ ಮಾಲಕಿ ತರುಣಮ್ ಬಾನುಗೆ ಮಗುವನ್ನು ಪತ್ತೆ ಹಚ್ಚಿಕೊಂಡುವಂತೆ ದುಂಬಾಲು ಬಿದ್ದಿದ್ದರು. ಆದರೆ, ಆರೋಪಿಗಳು ತಮಗೆ ಏನೂ ತಿಳಿದಿಲ್ಲ. ಅಲ್ಲದೆ, ಮಗುವನ್ನು ಯಾರು ಕಳವು ಮಾಡಿದ್ದಾರೆ ಎಂದು ಮುಬಾರಕ್ ಪಾಷಾ ನಂಬಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಈ ನಡುವೆ ಸವೋದ್ನಿಂದ 50 ಸಾವಿರ ರೂ. ಪಡೆದಿದ್ದ ತರುಣಮ್ ಬಾನು, ಮುಬಾರಕ್ ಪಾಷಾಗೆ ಉಳಿದ ಹಣ ಕೊಟ್ಟಿರಲಿಲ್ಲ. ಹೀಗಾಗಿ ಆ.16ರಂದು ವಿಲ್ಸನ್ ಗಾರ್ಡನ್ನ ಆಸ್ಪತ್ರೆಯೊಂದರ ಬಳಿ ಹಣ ಕೊಡುವಂತೆ ಇಬ್ಬರ ನಡುವಿನ ವಾಗ್ವಾದ ನಡೆಯುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮುಬಾರಕ್ ಪಾಷಾ ನಾಪತ್ತೆಯಾಗಿದ್ದಾನೆ. ಬಳಿಕ ತರುಣಮ್ ಬಾನುಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಗಳಿಂದ 50 ಸಾವಿರ ರೂ. ನಗದು ಹಾಗೂ ಮಗುವನ್ನು ರಕ್ಷಣೆ ಮಾಡಿ ತಾಯಿಗೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮುಬಾರಕ್ ಪಾಷಾಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.