ಮಹಾರಾಷ್ಟ್ರ: ವ್ಯಕ್ತಿಯೋರ್ವ ನಿಧಿಗಾಗಿ ತನ್ನ ಪತ್ನಿಯನ್ನೇ ನರಬಲಿ ಕೊಡಲು ಮುಂದಾದ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಟೊಂಕಾವು ಗ್ರಾಮದಲ್ಲಿ ನಡೆದಿದೆ. ಕೊನೆಗೂ ಹರಸಾಹಸಪಟ್ಟು ಮಹಿಳೆ ತನ್ನ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಟೊಂಕಾವು ಗ್ರಾಮದ ಸಂತೋಷ್ ಎಂಬಾತ ನಿಧಿ ಹುಡುಕಲು ಪೂಜೆ ನಡೆಸುತ್ತಿದ್ದು, ಸೆ.22ರಂದು ನಿಧಿ ಹುಡುಕಲು ಪೂಜೆ ಮಾಡುವು ಉದ್ದೇಶದಿಂದ ಮಾಟಗಾತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಾಟಗಾತಿಯು, ನಿಧಿ ಸಿಗಬೇಕಾದರೆ, ನರಬಲಿ ನೀಡಬೇಕು ಎಂದಿದ್ದಾಳೆ.
ಈ ವೇಳೆ ಯಾರನ್ನು ಬಲಿ ನೀಡುವುದು ಎಂದು ಯೋಚಿಸಿದ ಸಂತೋಷ್ ಕೊನೆಗೆ ತನ್ನ ಪತ್ನಿ ಮೀನಾಳನ್ನೇ ಬಲಿ ಕೊಡಲು ಯೋಚಿಸಿದ್ದು, ನಾನು ನಿನ್ನನ್ನು ಬಲಿ ಕೊಡಲು ನಿರ್ಧರಿಸಿದ್ದೇನೆ. ನೀನು ತಯಾರಾಗು ಎಂದು ಪತ್ನಿಗೆ ಹೇಳಿದ್ದಾನೆ. ಜೊತೆಗೆ ಪತ್ನಿಯನ್ನು ಬಲವಂತವಾಗಿ ಪೂಜೆಗೆ ಕೂರಿಸಿದ್ದಾನೆ. ಪತ್ನಿ ನಿರಾಕರಿಸಿದಾಗ ಆಕೆಗೆ ಹಲ್ಲೆ ಕೂಡ ನಡೆಸಿದ್ದಾನೆ.
ಪತಿಯ ಕೃತ್ಯದಿಂದ ತೀವ್ರವಾಗಿ ಭೀತಳಾದ ಪತ್ನಿ ಆತನ ಕೈಯಿಂದ ಹೇಗೋ ತಪ್ಪಿಸಿಕೊಂಡು ಮನೆಯಿಂದ ಹೊರಬಂದು ಹಳ್ಳಿಯ ಕೆಲವರಿಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ಹಳ್ಳಿಯವರು ಮಾಟಗಾತಿ ಹಾಗೂ ಸಂತೋಷ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಟಗಾತಿ ಹಾಗೂ ಸಂತೋಷ್ ನನ್ನು ಬಂಧಿಸಿದ್ದಾರೆ.