ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
“ಗಂಡು ಮೆಟ್ಟಿದ ನಾಡು ಐತಿಹಾಸಿಕ ಚಿತ್ರದುರ್ಗದಲ್ಲಿ ಕ್ರಿ.ಶ 1754 ರಿಂದ 1779 ರವರೆಗೆ ರಾಜ ಗಂಡುಗಲಿ ಮದಕರಿನಾಯಕ ಆಳ್ವಿಕೆ ನಡೆಸಿದ್ದರೂ, ಈ ಕಾಲಮಾನದಲ್ಲಿ ದುರ್ಗದ ಕೋಟೆಯನ್ನು ರಕ್ಷಿಸಿದ ಒನಕೆ ಓಬವ್ವ ಳಿಗೂ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಆಕೆಯ ಧೀರೋದ್ಧಾತ ನಿಲುವನ್ನು ಶ್ಲಾಘಿಸಲಾಗಿದೆ. ಬಹುಮುಖ್ಯವಾಗಿ ಸ್ವಾಮಿನಿಷ್ಠೆ, ಸಮಯ ಪ್ರಜ್ಞೆ ,ಸ್ಪೂರ್ತಿ, ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ದಾಖಲಾಗಿದೆ.
ಹೈದರಾಲಿಯ ಸೇನೆ ಕಳ್ಳಗಿಂಡಿಯ ಮೂಲಕ ಪ್ರವೇಶಿಸಿಸುದನ್ನು ಕಂಡು ಓಬವ್ವ ಅವರ ತಲೆಯನ್ನು ಒನಕೆಯಿಂದ ಬಾರಿಸಿ ಛಿದ್ರ ಛಿದ್ರ ಮಾಡಿ ಪಕ್ಕಕ್ಕೆ ಬಿಸಾಡಿ ರಣಚಂಡಿಯಂತೆ ಶತ್ರು ಸಂಹಾರಕ್ಕೆ ನಿಂತು ನೂರಾರು ಶತ್ರುಗಳ ತಲೆ ಹೊಡೆದಳು. ನಂತರ ಘನಘೋರ ಯುದ್ಧ ನಡೆದು ಶತ್ರು ಸೇನೆ ದಿಕ್ಕು ಪಾಲಾಗಿ ಓಡಿತು. ಶತ್ರುಗಳ ಸಂಹಾರ ಮಾಡಿ ಬಳಲಿ ಮೂರ್ಚಿತಲಾಗುವ ಓಬವ್ವಳಿಗೆ ನಂತರ ಸೂಕ್ತ ಚಿಕಿತ್ಸೆ ನೀಡುತ್ತಾರೆ.
ಅಂದಿನ ವಿಜಯಕ್ಕೆ ಕಾರಣರಾದ ಓಬವ್ವಳ ಸಾಹಸ ಎಲ್ಲಾ ವರ್ಗದವರ ಪ್ರಶಂಸೆಗೆ ಪಾತ್ರವಾಯಿತು. ಈ ಪ್ರಕರಣದ ನಂತರ ಎರಡು ವರ್ಷಗಳ ಕಾಲ ಆಕೆ ಬದುಕಿದ್ದು ಆಕೆಯ ಕಡೆಯವರು ದೊಡ್ಡ ಸಿದ್ದವ್ವ ಹಳ್ಳಿಯಲ್ಲಿ ಬದುಕಿದ್ದಾರೆಂದು ಅಭಿಪ್ರಾಯಪಡುತ್ತಾರೆ. ಓಬವ್ವ ನಾಡಪ್ರೇಮದ ಸಲುವಾಗಿ ಒನಕೆಯನ್ನು ಆಯುಧವನ್ನಾಗಿಸಿ ಶತ್ರುಗಳ ನಿರ್ನಾಮ ಮಾಡಿದಳು.
ಓಬವ್ವ ಎಂದಿಗೂ ಅಜರಾಮರ ಸ್ತ್ರೀ ಶಕ್ತಿಯ ಸಂಕೇತ. ಓಬವ್ವ ಜಯಂತಿಯನ್ನು ಆಚರಿಸುತ್ತಿರುವುದು ಇಡೀ ನಾರಿ ಕುಲಕ್ಕೆ ಸಂದ ಗೌರವ ” ಎಂದು ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಸುಮಂತ್ ಆಳ್ವ ಒನಕೆ ಓಬವ್ವಳ ಜೀವನ ಚರಿತ್ರೆಯನ್ನು ವಿವರಿಸಿದರು.
ಮೊದಲಿಗೆ ದಿನನಿತ್ಯದ ಸರಸ್ವತಿ ವಂದನೆ ಹಾಗೂ ಘೃತಾಹುತಿಯು ನಡೆಯಿತು . ನಂತರ ಅತಿಥಿಗಳಿಂದ ಒನಕೆ ಓಬವ್ವ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಅತಿಥಿಯಾದ ಲಕ್ಷ್ಮಿ ಜಯರಾಂ ಹಾಗೂ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ಉಪಸ್ಥಿತರಿದ್ದರು.