ಅನಂತಪುರಂ: ಎಸ್ಯುವಿ ವಾಹನ ಮತ್ತು ಲಾರಿ ನಡುವೆ ಡಿಕ್ಕಿಯಾಗಿ 9 ಮಂದಿ ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಬುಡಗಾವಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮದುವೆಗೆ ಹೋಗಿದ್ದ ಇವರು, ತಮ್ಮ ಉರವಕೊಂಡ ಗ್ರಾಮಕ್ಕೆ ವಾಪಸ್ ಬರುತ್ತಿದ್ದರು ಎಂದು ಆಂಧ್ರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತಕ್ಕೆ ಲಾರಿ ಚಾಲಕ ಅತ್ಯಂತ ವೇಗವಾಗಿ ವಾಹನ ಓಡಿಸಿದ್ದೇ ಕಾರಣ. ಈ ಲಾರಿ ಬುಡಗಾವಿ ಬಳಿ ಎಸ್ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿಯಾದ ಪರಿಣಾಮ 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬಾತನಿಗೆ ಗಂಭೀರ ಗಾಯಗೊಂಡು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಚಿಕಿತ್ಸೆ ಫಲಿಸದೆ ಆತನೂ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತಪಟ್ಟವರಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಕೂಡ ಇದ್ದಾರೆ. ಮೃತಪಟ್ಟವರಲ್ಲಿ ಆರು ಮಹಿಳೆಯರು, ಇಬ್ಬರು ಪುರುಷರು ಮತ್ತು ಒಬ್ಬ ಹುಡುಗ ಸೇರಿದ್ದಾನೆ. ಎಸ್ಯುವಿ ವಾಹನ ನುಜ್ಜುಗುಜ್ಜಾಗಿದ್ದ ಕಾರಣ ಮೃತದೇಹಗಳನ್ನು ಅದರಿಂದ ಹೊರತೆಗೆಯುವುದು ತುಂಬ ಕಷ್ಟವಾಯಿತೂ ಎಂದೂ ಮಾಹಿತಿ ನೀಡಿದ್ದಾರೆ.