ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ಆಶ್ರಯದಲ್ಲಿ ಮಹಿಳಾ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿ ಹಾಗೂ ಆಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣಾ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ದ.ಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಬ್ಬ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್ ನೊಂದಣಿ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಕೊರೊನಾ ಮಹಾಮಾರಿಯಿಂದ ಪ್ರತಿಯೊಬ್ಬರು ಕಷ್ಟದ ಜೀವನ ನಡೆಸುವಂತಾಗಿದೆ. ಮುಂದೆ ಕೂಡಾ ಕಷ್ಟದ ಜೀವನ ಮುಂದುವರಿಯುವ ಸಾಧ್ಯತೆವಿದೆ. ಅನಾರೋಗ್ಯದ ಹಾಗೂ ಆರ್ಥಿಕ ಹೊರೆ ತಪ್ಪಿಸಲು ಆಯುಷ್ಮಾನ್ ಕಾರ್ಡ್ ಅವಶ್ಯವಾಗಿದೆ. ದ.ಕ ಜಿಲ್ಲೆಯಾದ್ಯಂತ ಒಂದು ಲಕ್ಷ ಜನರಿಗೆ ಕಾರ್ಡ್ ಮಾಡಿಕೊಡಲು ಗುರಿ ಹೊಂದಿದೆ ಎಂದರು.
ವಿಟ್ಲದ ಉಪತಹಶೀಲ್ದಾರ್ ರವಿಶಂಕರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ಆಯುಷ್ಮಾನ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ, ಮನೋವೈದ್ಯ ಡಾ. ಅನಿರುದ್ಧ್ ಶೆಟ್ಟಿ, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟದ ವಿಟ್ಲ ವಲಯ ಅಧ್ಯಕ್ಷ ಜನಾರ್ದನ ಪದ್ಮಶಾಲಿ ವಿಟ್ಲ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೋಹನ್ ಕೆ ಸ್ವಾಗತಿಸಿದರು. ವಿಟ್ಲ ಮೇಲ್ವಿಚಾರಕ ರಮೇಶ್ ನಿರೂಪಿಸಿದರು. ಜೆವಿಕೆ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ ವಂದಿಸಿದರು. ಹೇಮವತಿ ಪ್ರಾರ್ಥಿಸಿದರು.