ಕುಂದಾಪುರ: ಕಿರಿಮಂಜೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತೃತ್ವದ ತಂಡ ತಡೆದು ಪೋಷಕರಿಗೆ ಕಾನೂನು ಮಾಹಿತಿ ನೀಡಿರುವ ಘಟನೆ ನಡೆದಿದೆ.
ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹೇಶ್, ಗ್ರಾಪಂ ಉಪಾಧ್ಯಕ್ಷ ಶೇಖರ್ ಖಾರ್ವಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ್, ಗ್ರಾಮ ಲೆಕ್ಕಿಗ, ಅಂಗನವಾಡಿ ಮೇಲ್ವಿಚಾರಕಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತರ ತಂಡ ಬೆಳಗ್ಗೆಯೇ ಬಾಲಕಿಯ ಮನೆ ಭೇಟಿ ನೀಡಿದ್ದು ಮನೆಯವರು ನಡೆಸಲು ಉದ್ದೇಶಿಸಿದ್ದ ನಿಶ್ಚಿತಾರ್ಥ ಕಾರ್ಯಕ್ರಮ ರದ್ದುಗೊಳಿಸಲು ಸೂಚಿಸಿತು.
ಬಳಿಕ ಅಪ್ರಾಪ್ತ ಬಾಲಕಿ ಹಾಗೂ ಹುಡುಗನ ಮನೆಯವರಿಗೆ ಸಮಾಲೋಚನೆ ನಡೆಸಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಲಾಯಿತು. ಬಾಲಕಿಯ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿರುವುದಾಗಿ ವರನ ಕಡೆಯವರು ನೀಡಿದ ಹೇಳಿಕೆಯಲ್ಲಿ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿ ಹಾಗೂ ಪೋಷಕರನ್ನು ಹಾಜರು ಪಡಿಸಿ, ಬಾಲಕಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಮದುವೆ ಮಾಡದಿರುವ ಬಗ್ಗೆ ತಿಳಿಹೇಳಿ ಬಾಲಕಿಯನ್ನು ಪೋಷಕರ ಸುಪರ್ದಿಗೆ ನೀಡಲಾಯಿತು.